Vaibhav Suryavanshi: ಗುವಾಹಟಿಯಲ್ಲಿ ಸೋಮವಾರ (ಮಾರ್ಚ್ 30) ನಡೆದ ಐಪಿಎಲ್ 2026ರ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ದಾಖಲಿಸಿತು. 15 ವರ್ಷದ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಆರಂಭ ನೀಡಿ ಆರ್ಆರ್ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇವರ ಆಕ್ರಮಣಕಾರಿ ಆಟದ ನೋಡಿ ದಂಗಾದ ನಾಯಕ ರಿಯಾನ್ ಪರಾಗ್ ಅಚ್ಚರಿಕೆ ಹೇಳಿಕೆ ನೀಡಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
15 ವರ್ಷದ ಪೋರನೊಬ್ಬ ದಿಗ್ಗಜ ತಂಡದ ಬೌಲರ್ಗಳನ್ನು ಮನಬಂದಂತೆ ದಂಡಿಸುತ್ತಿದ್ದರೆ ಯಾರಿಗೆ ತಾನೆ ಆಶ್ಚರ್ಯವಾಗುವುದಿಲ್ಲ ಹೇಳಿ. ಗುವಾಹಟಿಯಂತಹ ಪಿಚ್ನಲ್ಲಿ ವೈಭವ್ ಸೂರ್ಯವಂಶಿಯ ಆಕ್ರಣಮಣಕಾರಿ ಆಟಕ್ಕೆ ಸ್ವತಃ ತಂಡದ ಸೀನಿಯರ್ ಆಟಗಾರರೇ ಬೆರಗಾಗಿದ್ದಾರೆ. ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ನಾಯಕ ರಿಯಾನ್ ಪರಾಗ್ ವೈಭವ್ಗೆ ಕಿವಿಮಾತು ಹೇಳಿದ್ದಾರೆ. ಮೈದಾನದ ಹೊರಗಿನ ಚರ್ಚೆ ಬಿಟ್ಟು, ಬ್ಯಾಟಿಂಗ್ ಮತ್ತು ಆಹಾರದ ಕಡೆ ಗಮನ ಹರಿಸು ಎಂಬ ನಾಯಕನ ಕಿವಿಮಾತು ಈಗ ವೈರಲ್ ಆಗಿದೆ.

ವೈಭವ್ ಸೂರ್ಯವಂಶಿ ಒಬ್ಬ ಅದ್ಭುತ ಪ್ರತಿಭೆಯಾಗಿ ಬೆಳೆಯುತ್ತಿದ್ದಾರೆ. ಕಳೆದ ಸೀಸನ್ನ ಐಪಿಎಲ್ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಈ ಹದಿಹರೆಯದ ಆಟಗಾರ, ಇದೀಗ ಸೋಮವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ನಂತಹ ದಿಗ್ಗಜ ತಂಡದ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾನೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಪರ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾನೆ.
ಕೇವಲ 15 ವರ್ಷದ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಈ ಮಟ್ಟದಲ್ಲಿ ಹೇಗೆ ಪ್ರದರ್ಶನ ನೀಡಲು ಸಾಧ್ಯ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ನಡೆಯುತ್ತಿವೆ. ಅವರ ತಂಡದ ನಾಯಕ ರಿಯಾನ್ ಪರಾಗ್ ಅವರಿಗೂ ಇದೇ ಪ್ರಶ್ನೆ ಕಾಡುತ್ತಿದೆ. ಆದರೆ, ಈ ಯುವ ಆಟಗಾರನ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಪರಾಗ್ ಅವರು ವಿಶೇಷ ಭರವಸೆಯನ್ನು ನೀಡಿ ಗಮನ ಸೆಳೆದಿದ್ದಾರೆ.
ಗುವಾಹಟಿಯಲ್ಲಿ ಸಿಎಸ್ಕೆ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಎಂಟು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ನಂತರ ಮಾತನಾಡಿದ ರಿಯಾನ್ ಪರಾಗ್, "ವೈಭವ್ ಸೂರ್ಯವಂಶಿ ಈ ಸೀಸನ್ನ ಎಲ್ಲಾ 14 ಪಂದ್ಯಗಳನ್ನು ಆಡಲಿದ್ದಾರೆ ಎಂದು ನಾನು ಈಗಾಗಲೇ ಅವರಿಗೆ ತಿಳಿಸಿದ್ದೇನೆ. ಆದ್ದರಿಂದ ಮೈದಾನದ ಹೊರಗೆ ಅಥವಾ ಮಾಧ್ಯಮಗಳಲ್ಲಿ ಏನು ಹೇಳಲಾಗುತ್ತಿದೆ ಎಂಬ ಬಗ್ಗೆ ಅವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ," ಎಂದು ಹೇಳಿದರು.
ಪಂದ್ಯದ ನಂತರ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ರಿಯಾನ್ ಪರಾಗ್, "ನಾನು ವೈಭವ್ಗೆ ಹೇಳುವುದು ಇಷ್ಟೇ, ನೀನು ಈ ಸೀಸನ್ನ ಎಲ್ಲಾ 14 ಪಂದ್ಯಗಳನ್ನು ಆಡಬೇಕು. ಪಂದ್ಯದಲ್ಲಿ ಏನಾದರೂ ಆಗಲಿ, ಅದು ನಿನ್ನನ್ನು ಕುಗ್ಗಿಸಬಾರದು. ಹಾಗೆಯೇ ಮಾಧ್ಯಮಗಳಲ್ಲಿ ಏನೇ ಚರ್ಚೆಗಳು ನಡೆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು," ಎನ್ನುವ ಧೈರ್ಯದ ಮಾತನ್ನು ಹೇಳಿದರು.
"ವೈಭವ್ ಸೂರ್ಯವಂಶಿ ಅವರ ಮೇಲೆ ಯಾವುದೇ ಒತ್ತಡವಿಲ್ಲದೆ ಅತ್ಯುತ್ತಮ ಮಾನಸಿಕ ಸ್ಥಿತಿಯಲ್ಲಿರಲು ಇಡೀ ತಂಡ ಶ್ರಮಿಸುತ್ತಿದೆ. ಅವರಿಗೆ ಅಗತ್ಯವಿರುವ ಬ್ಯಾಟಿಂಗ್ ಅಭ್ಯಾಸದಿಂದ ಹಿಡಿದು ಆಹಾರದವರೆಗೆ ಎಲ್ಲವೂ ಸಮರ್ಪಕವಾಗಿ ಸಿಗುವಂತೆ ತಂಡವು ನೋಡಿಕೊಳ್ಳುತ್ತಿದೆ," ಎಂದು ಅವರು ತಿಳಿಸಿದರು.
"ಸಿಎಸ್ಕೆ ವಿರುದ್ಧದ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡುವ ಪ್ರೇಕ್ಷಕರಂತೆ, ತಾನು ಮತ್ತು ವಿಕೆಟ್ ಕೀಪರ್ ಧ್ರುವ್ ಜುರೆಲ್ ಕೂಡ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ನೋಡಿ ಅಷ್ಟೇ ಆಶ್ಚರ್ಯಚಕಿತರಾಗಿದ್ದೇವೆ. ಧ್ರುವ್ ಜುರೆಲ್ ಮತ್ತು ನಾನು ಕುಳಿತು ಅವನ ಬ್ಯಾಟಿಂಗ್ ನೋಡುತ್ತಿದ್ದೆವು. ಪಿಚ್ ಸ್ವಲ್ಪ ತೇವಾಂಶವಿದ್ದರಿಂದ ಅಲ್ಲಿ ಏನಾಗುತ್ತಿದೆ ಎಂದು ನಮಗೆ ಆತಂಕ ಮೂಡಿತ್ತು. ಆದರೆ, ಅಲ್ಲಿ ಎದುರಾಳಿ ಬೌಲರ್ಗಳ ಮೇಲೆ ವೈಭವ್ ದಂಡಯಾತ್ರೆ ಮುಂದುವರೆಸಿದ್ದ. ಅವನು ಇದನ್ನು ಹೇಗೆ ಮಾಡಲು ಸಾಧ್ಯ ಎಂದು ನಾವು ಆಶ್ಚರ್ಯಕ್ಕೆ ಒಳಗಾದೆವು. ಅವನು ಅದ್ಭುತ ಪ್ರತಿಭೆ ಮತ್ತು ನಮ್ಮ ತಂಡದಲ್ಲಿದ್ದಾನೆ, ಎದುರಾಳಿ ತಂಡದಲ್ಲಿಲ್ಲ ಎಂಬುದು ನನಗೆ ತುಂಬಾ ಸಂತೋಷ ತಂದಿದೆ," ಎಂದು ಅವರು ಹೇಳಿದರು. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಆಟಕ್ಕೆ ಫಿದಾ ಆದ ನಾಯಕ ರಿಯಾನ್ ಪರಾಗ್ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿ ಗಮನ ಸೆಳೆದಿದ್ದಾರೆ.