ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ರಸ್ತೆ ಅಪಘಾತಕ್ಕೆ ತುತ್ತಾಗಿದ್ದಾರೆ. ಇವರು ಇರಾನಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಬೇಕಿತ್ತು. ಆದರೆ ಗಾಯದ ಸಮಸ್ಯೆಯಿಂದ ಇವರು ಇರಾನಿ ಕಪ್ನಿಂದ ದೂರ ಸರೆದಿದ್ದಾರೆ.
ಮುಶೀರ್ ತಮ್ಮ ತಂದೆ ನೌಶಾದ್ ಖಾನ್ ಅವರ ಜೊತೆ ಇರಾನಿ ಕಪ್ ಕ್ರಿಕೆಟ್ ಟೂರ್ನಿ ನಡೆಯಬೇಕಿದ್ದ ಸ್ಥಳವಾದ ಲಕ್ನೌಗೆ ಪ್ರಯಾಣ ಬೆಳೆಸಿದ್ದರು. ಹೈವೇನಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮುಶೀರ್ ಅವರ ಕುತ್ತಿಗೆಗೆ ಗಾಯವಾಗಿದ್ದು, ಅವರ ತಂದೆಗೆ ಸಣ್ಣ ಪುಟ್ಟ ಗಾಯಗಳು ಆಗಿವೆ.

ದುರ್ಘಟನೆಯ ಬಳಿಕ ಮುಶೀರ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಭರವಸೆಯ ಬ್ಯಾಟರ್ನನ್ನು ತಪಾಸಣೆ ನಡೆಸಿದ ವೈದ್ಯರು ಮುಶೀರ್ ಗುಣಮುಖರಾಗಲು ಕನಿಷ್ಠ ನಾಲ್ಕು ತಿಂಗಳು ಬೇಕಾಗಬಹುದು ಎಂದಿದ್ದಾರೆ. ಕುತ್ತಿಗೆಯ ಭಾಗದಲ್ಲಿ ಮುಶೀರ್ ಅವರಿಗೆ ಗಂಭೀರ ಗಾಯವಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಮುಂಬೈಗೆ ಕರೆದೊಯ್ಯುವ ಸಾಧ್ಯತೆ ಇದೆ. ಇನ್ನು ವೈದ್ಯರ ಮಾಹಿತಿಯಂತೆ ಮುಶೀರ್ ಆಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಟೈಮ್ ಆಫ್ ಇಂಡಿಯಾ ಮುಶೀರ್ ಖಾನ್ ಮುಂಬೈ ತಂಡದ ಜೊತೆ ಪ್ರಯಾಣ ಬೆಳೆಸುತ್ತಿಲ್ಲ ಎಂದು ವರದಿ ಮಾಡಿತ್ತು. ಮಾಹಿತಿಯಂತೆ ಅವರ ತಂದೆ ಹಾಗೂ ಮುಶೀರ್ ಅಜಂಗಢ್ನಿಂದ ಲಕ್ನೋಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇತ್ತು. ಇರಾನಿ ಕಪ್ಗೆ ಮುಂಬೈ ತಂಡದ ಜೊತೆ ಮುಶೀರ್ ಪ್ರವಾಸ ಬೆಳೆಸಲಿಲ್ಲ. ಅವರು ತಂದೆಯೊಂದಿಗೆ ಅಜಂಗಢ್ನಿಂದ ಪಂದ್ಯದ ಸ್ಥಳಕ್ಕೆ ಬರುವ ಸಾಧ್ಯತೆ ಇತ್ತು.

ದಿ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಎಂಸಿಎ ಅಧಿಕಾರಿ ಈ ಅಪಘಾತ ಶುಕ್ರವಾರ ರಾತ್ರಿ ಸಂಭವಿಸಿದೆ. ಭಾನುವಾರ ಮುಶೀರ್ ಮುಂಬೈಗೆ ವಾಪಸ್ ಆಗಲಿದ್ದಾರೆ. ಈ ವೇಳೆ ಅವರ ಆರೋಗ್ಯದ ತಪಾಸಣೆಯನ್ನು ಎಂಸಿಎ ಹಾಗೂ ಬಿಸಿಸಿಐನ ವೈದ್ಯಕೀಯ ತಂಡ ನೆರವೇರಿಸಲಿದ್ದು, ಅವರ ಆರೋಗ್ಯದ ಮೇಲೆ ನಿಗಾವಹಿಸಲಿದೆ ಎಂದು ತಿಳಿಸಿದ್ದಾರೆ.
ಈ ಗಾಯ ನಿಜಕ್ಕೂ ಮುಂಬೈ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ದುಲೀಪ್ ಟ್ರೋಫಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮುಶೀರ್ ಮೊದಲ ಪಂದ್ಯದಲ್ಲೇ 181 ರನ್ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಭರ್ಜರಿ ಫಾರ್ಮ್ನಲ್ಲಿದ್ದರು. ಇವರ ಭರ್ಜರಿ ಆಟದ ನೆರವಿನಿಂದ ಭಾರತ ಬಿ ತಂಡ 76 ರನ್ಗಳಿಂದ ಭಾರತ ಎ ತಂಡವನ್ನು ಮಣಿಸಿತ್ತು. ಮುಶೀರ್ ಖಾನ್ ಅಬ್ಬರದ ಆಟಕ್ಕೆ ಪ್ರತಿಯಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಗರಿ ಸಹ ಸಂದಿತ್ತು.
ಅಂಡರ್ 19 ವಿಶ್ವಕಪ್ನಲ್ಲೂ ಅಬ್ಬರದ ಆಟವನ್ನು ಪ್ರದರ್ಶಿಸಿರುವ ಮುಶೀರ್ ಖಾನ್ ಎರಡು ಶತಕ ಬಾರಿಸಿದ್ದರು. ಅಲ್ಲದೆ ಇವತ್ತಿನ ವರೆಗೂ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 51.44ರ ಸರಾಸರಿಯಲ್ಲಿ 716 ರನ್ ಸಿಡಿಸಿದ್ದಾರೆ. ರೆಡ್ ಬೌಲ್ ಕ್ರಿಕೆಟ್ನಲ್ಲಿ ಮೂರು ಶತಕ ಹಾಗೂ ಒಂದು ಅರ್ಧಶತಕವನ್ನು ಸಹ ಸಿಡಿಸಿದ್ದಾರೆ. ಇವರು ತಮ್ಮ ಲೆಫ್ಟ್ ಆರ್ಮ್ ಸ್ಪಿನ್ ಬೌಲಿಂಗ್ನಲ್ಲಿ ಎಂಟು ವಿಕೆಟ್ ಕಬಳಿಸಿದ್ದಾರೆ.