17 ಆವೃತ್ತಿಗಳಲ್ಲಿ ಕಪ್ ಗೆಲ್ಲುವಲ್ಲಿ ವಿಫಲರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದರೆ ಈ ಬಾರಿ ಆರ್ಸಿಬಿ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿದ್ದು, ಅಭಿಮಾನಿಗಳ ಜೋಶ್ ಹೆಚ್ಚಿಸಿದೆ. ಈ ಬಾರಿ ಆರ್ಸಿಬಿ ಆಟಗಾರರ ಪ್ರದರ್ಶನ ಕಂಡು, ಆರ್ಸಿಬಿ ತಂಡದ ಮಾಜಿ ಆಟಗಾರ ಗುಣಗಾನ ಮಾಡಿದ್ದಾರೆ. ಅಲ್ಲದೆ ಈ ಬಾರಿ ಆರ್ಸಿಬಿ ತಂಡಕ್ಕೆ ಪ್ರಶಸ್ತಿ ಎತ್ತುವ ಚಾನ್ಸ್ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಆರ್ಸಿಬಿ ಪ್ರಸಕ್ತ ಸಾಲಿನ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತ್ತು. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ಅವರದ್ದೇ ತವರಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೋಲುಣಿಸಿತ್ತು. ಇದು ಚೆನ್ನೈನಲ್ಲಿ ಆರ್ಸಿಬಿ ಗಳಿಸಿದ ಎರಡನೇ ಗೆಲುವಾಗಿದೆ. ಇನ್ನು ಆರ್ಸಿಬಿ 17 ವರ್ಷಗಳ ಬಳಿಕ ಚೆನ್ನೈನಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ತಂಡದ ಪ್ರದರ್ಶನವನ್ನು ಕಂಡು ಹಲವು ಆಟಗಾರರು ಅವರ ಬೆನ್ನು ತಟ್ಟಿದ್ದಾರೆ.

ಆರ್ಸಿಬಿ ಪ್ರದರ್ಶನವನ್ನು ನೋಡಿದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಸಹ ಆರ್ಸಿಬಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇವರು ಕಳೆದ 17 ವರ್ಷಗಳಲ್ಲಿ ಮಾಡಲಾಗದ ಸಾಧನೆಯನ್ನು ಈ ಬಾರಿ ಆರ್ಸಿಬಿ ಮಾಡುವ ಸಾಧ್ಯತೆ ಇದೆ. ಈ ಬಾರಿಯ ಆರ್ಸಿಬಿ ತಂಡ ಬಲಿಷ್ಠವಾಗಿದೆ. ರಜತ್ ಪಟಿದಾರ್ ನಾಯಕನಾಗಿ ತಂಡವನ್ನು ಮುನ್ನಡೆಸಿರುವುದು ನಿಜಕ್ಕೂ ಅಮೋಘ. ಅವರ ಶಾಂತ ಸ್ವಭಾವ ಹಾಗೂ ಕ್ರೀಡಾ ಪ್ರೀತಿ ನನಗೆ ಇಷ್ಟವಾಯಿತು. ಯಾರೊ ಒಬ್ಬರು ಕೂಲ್ ಆಗಿ ತಂಡವನ್ನು ಮುನ್ನಡೆಸುತ್ತಿರುವುದನ್ನು ಕಂಡು ತುಂಬಾನೇ ಖುಷಿ ಆಯಿತು. ಒತ್ತಡದ ಸನ್ನಿವೇಶದಲ್ಲಿ ಅವರು ತೋರಿದ ಶಾಂತ ಸ್ವಭಾವ ನನ್ನ ಮನಸ್ಸು ಗೆದ್ದಿತು ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸುಯೇಶ್ ಶರ್ಮಾ ಅವರನ್ನು ಬಳಸಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ. ಆಂಡ್ರೆ ರಸೆಲ್ ಬ್ಯಾಟಿಂಗ್ಗೆ ಬಂದಾಗ ಸುಯೇಶ್ ಶರ್ಮಾ ಅವರಿಗೆ ಬೌಲ್ ಕೊಟ್ಟಿದ್ದು ಬೆಸ್ಟ್ ನಡೆಯಾಗಿತ್ತು. ಇವರನ್ನು ಔಟ್ ಮಾಡುವುದು ನಿನ್ನ ಗುರಿ ಎಂದು ಸುಯೇಶ್ಗೆ ರಜತ್ ಹೇಳಿ ಚೆಂಡನ್ನು ನೀಡಿದ ಹಾಗೆ ಇತ್ತು. ಬೌಲರ್ ಒಬ್ಬ ತನ್ನ ಮೂರು ಓವರ್ಗಳಲ್ಲಿ 40 ರನ್ ನೀಡಿದರೂ ಅವರ ಮೇಲೆ ವಿಶ್ವಾಸ ತೋರಿಸಿ ಅವರಿಗೆ ಚೆಂಡನ್ನು ನೀಡಿದ್ದು ಶ್ಲಾಘನೀಯ ಎಂದು ರಾಬಿನ್ ಹೇಳಿದ್ದಾರೆ.

ರಜತ್ ಪಟಿದಾರ್ ಬ್ಯಾಟ್ ಮಾಡಿರುವ ಧಾಟಿಗೂ ರಾಬಿನ್ ಉತ್ತಪ್ಪ ಮನಸೋತಿದ್ದಾರೆ. ನಾಯಕನಾಗಿ ಒತ್ತಡವನ್ನು ತೆಗೆದುಕೊಳ್ಳದೇ ಬ್ಯಾಟ್ ಮಾಡಿದ ರೀತಿ ಅಮೋಘ. ಇನ್ನು ಮೈದಾನದಲ್ಲಿ ಅವರು ನಾಯಕನಾಗಿ ನಡೆದುಕೊಂಡ ರೀತಿ ಅನುಕರಣೀಯ. ಈ ಬಾರಿಯ ಆರ್ಸಿಬಿ ತಂಡವನ್ನು ನೋಡಿದರೆ ಪ್ಲೇ ಆಫ್ಗೆ ನಿಸ್ಸಂದೇಹವಾಗಿ ಹೋಗಬಹುದು ಎಂದು ಅನಿಸುತ್ತದೆ ಎಂದು ಮಾಜಿ ಆಟಗಾರ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.