
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐನ ನೂತನ ಅಧ್ಯಕ್ಷರ ನೇಮಕವಾಗಿದೆ. ಸುಮಾರು ಮೂರು ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸೌರವ್ ಗಂಗೂಲಿ ಹುದ್ದೆ ತೊರೆದಿದ್ದು ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಈ ಹುದ್ದೆಗೇರಿದ್ದಾರೆ. ಅಧ್ಯಕ್ಷರಾಗಿ ನೇಮಕವಾದ ಬಳಿಕ ರೋಜರ್ ಬಿನ್ನಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು ಎರಡು ಅಂಶಗಳ ಕಡೆಗೆ ತಾನು ಹೆಚ್ಚಿನ ಗಮನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಎಎನ್ಐಗೆ ರೋಜರ್ ಬಿನ್ನಿ ಪ್ರತಿಕ್ರಿಯಿಸಿದ್ದು ಬಿಸಿಸಿಐ ಅಧ್ಯಕ್ಷರಾಗಿ ತಮ್ಮ ಮೂಲ ಗುರಿ ಏನು ಎಂಬುದನ್ನು ವಿವರಿಸಿದ್ದಾರೆ. "ಬಿಸಿಸಿಐ ಅಧ್ಯಕ್ಷನಾಗಿ ನಾನು ಪ್ರಾಥಮಿಕವಾಗಿ ಎರಡು ವಿಷಯಗಳ ಮೇಲೆ ಹೆಚ್ಚು ಗಮನ ನೀಡಲು ಬಯಸುತ್ತೇನೆ. ಮೊದಲನೆಯದು ಆಟಗಾರರು ಗಾಯಗೊಳ್ಳುವುದನ್ನು ತಡೆಗಟ್ಟುವುದು ಹಾಗೂ ಎರಡನೆಯದಾಗಿ, ನಾನು ದೇಶದ ಪಿಚ್ಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ. ವಿಶ್ವಕಪ್ಗೆ ಮುನ್ನ ಜಸ್ಪ್ರೀತ್ ಬುಮ್ರಾ ಗಾಯಗೊಂಡರು ಇದು ಇಡೀ ವಿಶ್ವಕಪ್ ಯೋಜನೆಗೆ ದೊಡ್ಡ ಏಟು ನೀಡಿತು ಎಂದು ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಪ್ರತಿಕ್ರಿಯಿಸಿದ್ದಾರೆ.
ರೋಜರ್ ಬಿನ್ನಿ ಭಾರತವನ್ನು 27 ಟೆಸ್ಟ್ ಪಂದ್ಯಗಳಲ್ಲಿ ಮತ್ತು 72 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಬಲಗೈ ವೇಗಿ ಟೆಸ್ಟ್ ಕ್ರಿಕೆಟ್ನಲ್ಲಿ 47 ವಿಕೆಟ್ ಪಡೆದರೆ, ಏಕದಿನದಲ್ಲಿ 77 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 1983ರ ವಿಶ್ವಕಪ್ನಲ್ಲಿ 18 ವಿಕೆಟ್ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದ ಬಿನ್ನಿ ಭಾರತದ ಮೊದಲ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಮಂಗಳವಾರ ನಡೆದ 91ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಸೌರವ್ ಗಂಗೂಲಿ ನೂತನವಾಗಿ ನೇಮಕವಾಗಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ಶುಭ ಹಾರೈಸಿದ್ದಾರೆ. "ರೋಜರ್ ಬಿನ್ನಿಗೆ ನಾನು ನಾನು ಶುಭ ಹಾರೈಸುತ್ತಿದ್ದೇನೆ. ಹೊಸ ತಂಡ ಮಂಡಳಿಯನ್ನು ಮುನ್ನಡೆಸಲಿದೆ. ಶ್ರೇಷ್ಠರ ಕೈಯ್ಯಲ್ಲಿ ಬಿಸಿಸಿಐ ಇದೆ. ಭಾರತೀಯ ಕ್ರಿಕೆಟ್ ಸಾಕಷ್ಟು ಬಲಿಷ್ಠವಾಗಿದ್ದು ಅವರೆಲ್ಲರಿಗೂ ನಾನು ಶುಭಹಾರೈಸುತ್ತೇನೆ" ಎಂದಿದ್ದಾರೆ ಸೌರವ್ ಗಂಗೂಲಿ.
"ನಾನು ಬೆಂಗಾಲ್ ಕ್ರಿಕೆಟ್ ಅಸೊಸಿಯೇಶನ್ನ ಅಧ್ಯಕ್ಷನಾಗಿ ಐದು ವರ್ಷಗಳ ಕಾಲ ಆಡಳೀತ ನಡೆಸಿದ್ದೆ. ಬಿಸಿಸಿಐ ಅಧ್ಯಕ್ಷನಾಗಿ ಕೆಲ ವರ್ಷಗಳ ಕಾಲ ಇದ್ದೇನೆ. ಇಷ್ಟು ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ನೀವು ಹುದ್ದೆಯನ್ನು ಬಿಟ್ಟು ಹೋಗುವುದು ಉತ್ತಮ. ಆಡಳಿತಗಾರನಾಗಿ ಸಾಕಷ್ಟು ಕೊಡುಗೆ ನೀಡಬೇಕಾಗುತ್ತದೆ ಹಾಗೂ ತಂಡದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಆಟಗಾರನೂ ಆಗಿದ್ದುಕೊಂಡು ನಾನು ಇಷ್ಟು ವಿಚಾರಗಳನ್ನು ಅರಿತುಕೊಂಡಿದ್ದೆ. ಆಡಳಿತಗಾರನಾಗಿ ನನ್ನ ಅವಧಿಯನ್ನು ನಾನು ಸಾಕಷ್ಟು ಆನಂದಿಸಿದ್ದೇನೆ. ನೀವು ಆಟಗಾರನಾಗಿ ಯಾವಾಗಲೂ ಆಡಿಕೊಂಡಿರಲು ಸಾಧ್ಯವಿಲ್ಲ ಹಾಗೂ ಆಡಳಿತಗಾರನಾಗಿಯೂ ಯಾವಾಗಲೂ ಮುಂದುವರಿಯಲು ಸಾಧ್ಯವಿಲ್ಲ" ಎಂದಿದ್ದಾರೆ.