ಅನಿಶ್ಚಿತತೆಗಳಿಂದ ತುಂಬಿರುವ ಭಾರತೀಯ ಕ್ರಿಕೆಟ್ ಭವಿಷ್ಯವು, ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆಯು ಇದೀಗ ಚರ್ಚಾ ವಿಷಯದ ಕೇಂದ್ರಬಿಂದುವಾಗಿದೆ.
ಭಾರತೀಯ ಕ್ರಿಕೆಟ್ನ 'ದಾದಾ' ಎಂದೇ ಕರೆಯಲ್ಪಡುವ ಮಾಜಿ ನಾಯಕ ಸೌರವ್ ಗಂಗೂಲಿ ಇತ್ತೀಚೆಗೆ ಹೆಚ್ಚು ಚರ್ಚಾಸ್ಪದ ವಿಷಯದ ಬಗ್ಗೆ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಅವರ ಬೆನ್ನಿಗೆ ನಿಂತಿದ್ದಾರೆ.
2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸಬೇಕು ಎಂಬುದು ಚರ್ಚೆಯ ವಿಷಯವಾಗಿದೆ. ಒಂದು ಕಡೆ ಅನುಭವಿ ರೋಹಿತ್ ಶರ್ಮಾ ಇದ್ದರೆ, ಮತ್ತೊಂದೆಡೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಟವೆಲ್ ಹಾಸಿದ್ದಾರೆ.

2000ರ ನಂತರ ಭಾರತದ ಕ್ರಿಕೆಟ್ ಭವಿಷ್ಯವನ್ನು ರೂಪಿಸಿದ ಪ್ರಮುಖ ಆಟಗಾರನಾಗಿರುವ ಸೌರವ್ ಗಂಗೂಲಿ, 2024ರ ಟಿ20 ವಿಶ್ವಕಪ್ನಲ್ಲಿ ನಾಯಕನ ಕ್ಯಾಪ್ ಧರಿಸಲು ರೋಹಿತ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದರು.
ಭಾರತೀಯ ಕ್ರಿಕೆಟ್ನ ಮಾಜಿ ನಾಯಕ ಸೌರವ್ ಗಂಗೂಲಿ ಅವರು ರೋಹಿತ್ ಶರ್ಮಾರ ನಾಯಕತ್ವದ ಕೌಶಲ್ಯ ಮತ್ತು ಕ್ರಿಕೆಟ್ ಜಾಣ್ಮೆಯನ್ನು ಎತ್ತಿ ತೋರಿಸಿದರು. ಹೆಚ್ಚಿನ ಮಹತ್ವ ಹೊಂದಿರುವ ಐಸಿಸಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಕೊನೆಯ ಬಾರಿಗೆ ಮುನ್ನಡೆಸಲು ಸೂಕ್ತವಾದ ಆಯ್ಕೆ ಎಂದು ತಿಳಿಸಿದರು.
ಇದೇ ವೇಳೆ, ಸೌರವ್ ಗಂಗೂಲಿ ಅವರು ಭಾರತ ತಂಡದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಉಪಸ್ಥಿತಿಯ ಮಹತ್ವವನ್ನು ಒತ್ತಿಹೇಳಿದ್ದಾರೆ. ಆದಾಗ್ಯೂ, 2022ರ ವಿಶ್ವಕಪ್ ನಂತರ ಟಿ20 ಪಂದ್ಯಗಳಿಂದ ಇವರಿಬ್ಬರ 14 ತಿಂಗಳ ವಿಶ್ರಾಂತಿಯ ಬಗ್ಗೆ ಇರುವ ಕಳವಳವನ್ನು ತಳ್ಳಿಹಾಕಿದರು.
"ಖಂಡಿತವಾಗಿಯೂ ರೋಹಿತ್ ಶರ್ಮಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕರಾಗಬೇಕು. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಇರಬೇಕು. ಕೊಹ್ಲಿ ಒಬ್ಬ ಅತ್ಯುತ್ತಮ ಆಟಗಾರ, ಅವರು ದೀರ್ಘಾವಧಿಯ ನಂತರ, ಟಿ20 ಪಂದ್ಯಕ್ಕೆ ಮರಳಿದರೂ ಏನೂ ತೊಂದರೆ ಇಲ್ಲ," ಎಂದು ಸೌರವ್ ಗಂಗೂಲಿ ಹೇಳಿದರು.

ಹಿಂದಿನ 2022ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಹೃದಯ ವಿದ್ರಾವಕ ಸೆಮಿಫೈನಲ್ ಸೋಲಿನ ಪಂದ್ಯವು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ಕೊನೆಯ ಟಿ20 ಪ್ರದರ್ಶನವಾಗಿತ್ತು. ಆನಂತರ ಒಂದೇ ಒಂದು ಟಿ20 ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ.
ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಅನುಭವಿ ಆಟಗಾರರನ್ನು ತಂಡದಲ್ಲಿ ಸೇರಿಸಬೇಕೆ ಎಂಬುದರ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಸುದೀರ್ಘ ಚರ್ಚೆಯ ನಂತರ, ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿತು. ಇದಕ್ಕೂ ಮುನ್ನ ಈ ಮಹತ್ವದ ವಿಚಾರದಲ್ಲಿ ಆಯ್ಕೆಗಾರರ ನಿರ್ಧಾರಕ್ಕಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸುತ್ತಿದ್ದಂತೆ, ರೋಹಿತ್ ಶರ್ಮಾ ನಾಯಕನಾಗಿ ಪುನರಾಗಮನ ಮಾಡಿದರು ಮತ್ತು ವಿರಾಟ್ ಕೊಹ್ಲಿ ಬ್ಯಾಟ್ನೊಂದಿಗೆ ತಮ್ಮ ಕ್ಲಾಸ್ ಆಟವನ್ನು ಪ್ರದರ್ಶಿಸಲು ಸಜ್ಜಾದರು.
ಇದಕ್ಕೂ ಮುನ್ನ ಅವರ ಅನುಪಸ್ಥಿತಿಯಲ್ಲಿ ಯುವ ಪ್ರತಿಭೆಗಳಾದ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಅವರ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿತ್ತು.