ಏಷ್ಯಾ ಕಪ್ ಹಾಗೂ ವಿಶ್ವಕಪ್ನಂಥಾ ಮೆಗಾ ಟೂರ್ನಿಗಳ ಆರಂಭಕ್ಕೆ ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಎಲ್ಲಾ ತಂಡಗಳು ಕೂಡ ಕೊನೆಯ ಹಂತದ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದು ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ಆದರೆ ಟೀಮ್ ಇಂಡಿಯಾ ಈ ಬಾರಿಯೂ ಕಳೆದ ಏಕದಿನ ವಿಶ್ವಕಪ್ನಲ್ಲಿ ಅನುಭವಿಸಿದ ಸಮಸ್ಯೆಯನ್ನೇ ಎದುರಿಸುತ್ತಿದೆ. ಈ ವಿಚಾರವನ್ನು ಸ್ವತಃ ನಾಯಕ ರೋಹಿತ್ ಶರ್ಮಾ ಕೂಡ ಈಗ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
2019ರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಸಮಸ್ಯೆಯಾಗಿ ಕಾಡಿದ್ದು 4ನೇ ಕ್ರಮಾಂಕ. ಅದಾದ ಬಳಿಕ ಶ್ರೇಯಸ್ ಐಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ದೊಡ್ಡದೊಂದು ಸಮಸ್ಯೆಗೆ ಪರಹಾರ ರೂಪದಲ್ಲಿ ಕಾಣಿಸಿಕೊಂಡಿದ್ದರು. ಆದರೆ ವಿಶ್ವಕಪ್ ಟೂರ್ನಿಯ ಸನಿಹದಲ್ಲಿರುಆಗ ಶ್ರೇಯಸ್ ಐಯ್ಯರ್ ಗಾಯಕ್ಕೆ ತುತ್ತಾಗಿದ್ದು ಮತ್ತೆ ನಾಲ್ಕನೇ ಕ್ರಮಾಂಕದ ಬಗ್ಗೆ ದೊಡ್ಡ ಪ್ರಶ್ನೆಯನ್ನುಂಟು ಮಾಡಿದೆ.

ಈ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ. "ನೋಡಿ, 4ನೇ ಕ್ರಮಾಂಕದ ಸಮಸ್ಯೆ ನಮಗೆ ಬಹಳ ಕಾಲದಿಂದ ಇದೆ. ಯುವರಾಜ್ ಸಿಂಗ್ ಬಳಿಕ ಯಾರೂ ಕೂಡ ಅಲ್ಲಿ ಸ್ಥಿರವಾಗಿ ಉಳಿಯಲು ಸಾಧ್ಯವಾಗಿಲ್ಲ. ಆದರೆ ಶ್ರೇಯಸ್ ಐಯ್ಯರ್ ಸುದೀರ್ಘ ಕಾಲದಿಂದ ಆ ಕ್ರಮಾಂಕದಲ್ಲಿ ಆಡಿ ಉತ್ತಮವಾಗಿ ಪ್ರದರ್ಶನ ನೀಡಿದ್ದರು. ಅವರ ಅಂಕಿಅಂಶಗಳು ಬಹಳ ಉತ್ತಮವಾಗಿತ್ತು" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
"ದುರದೃಷ್ಟವಶಾತ್ ಗಾಯ ಅವರಿಗೆ ಸಾಕಷ್ಟು ಸಮಸ್ಯೆ ನೀಡಿದೆ. ಅವರು ಸ್ವಲ್ಪ ಸಮಯದಿಂದ ಮೈದಾನದಿಂದ ಹೊರಗಿದ್ದಾರೆ. ಕಳೆದ 4-5 ವರ್ಷಗಳಲ್ಲಿ ಇದುವೇ ಆಗಿದೆ. ಸಾಕಷ್ಟು ಯುವ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಹೊಸ ಹುಡುಗರು ಬಂದು ಆ ಕ್ರಮಾಂಖದಲ್ಲಿ ಆಡುತ್ತಿದ್ದಾರೆ" ಎಂದಿದ್ದಾರೆ.
"ಕಳೆದ ನಾಲ್ಕೈದು ವರ್ಷಗಳಲ್ಲಿ ಗಾಯದ ಪ್ರಮಾಣವನ್ನು ನೋಡಿದರೆ ಬಹಳ ಇದೆ. ಆಟಗಾರರು ಗಾಯಕ್ಕೆ ಒಳಗಾಗಿ ಅಲಭ್ಯವಾಗಿದ್ದಾಗ ನಾವು ಬೇರೆ ಆಟಗಾರರಿಂದ ಅದನ್ನು ಸರಿಪಡಿಸಿಕೊಳ್ಳಲು ನೋಡುತ್ತೇವೆ. ಈಗ ನಾಲ್ಕನೇ ಕ್ರಮಾಂಕದಲ್ಲಿಯೂ ಅದನ್ನೇ ಹೇಳುತ್ತಿದ್ದೇನೆ. ನಾನು ನಾಯಕನಾಗುವುದಕ್ಕಿಂತ ಮುನ್ನ ಕೂಡ ನೇಡಿದ್ದೇನೆ. ಸಾಕಷ್ಟು ಆಟಗಾರರು ಅಲ್ಲಿ ಆಡಿ ಹೋಗಿದ್ದಾರೆ. ಅವರು ಗಾಯಕ್ಕೆ ತುತ್ತಾಗುತ್ತಿದ್ದಾರೆ ಅಥವಾ ಫಾರ್ಮ್ ಕಳೆದುಕೊಳ್ಳುತ್ತಿದ್ದಾರೆ. ಹೀಗೆಯೇ ಆಗುತ್ತಿದೆ.
ಇನ್ನು ಶ್ರೇಯಸ್ ಐಯ್ಯರ್ ಹಾಗೂ ಕೆಎಲ್ ರಾಹುಲ್ ಇಬ್ಬರು ಕೂಡ ಕಮ್ಬ್ಯಾಕ್ ಮಾಡುವ ಸನಿಹದಲ್ಲಿದ್ದಾರೆ. ಕೆಎಲ್ ರಾಹುಲ್ ಐದನೇ ಕ್ರಮಾಂಕದ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಜವಾಬ್ಧಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ರೋಹಿತ್ ಈ ಇಬ್ಬರು ಆಟಗಾರರ ಚೇತರಿಕೆ ಹೇಗೆ ನಡೆಯಲಿದೆ ಎನ್ನುವುದನ್ನು ಕಾದು ನೋಡಲಿದ್ದೇವೆ ಎಂದಿದ್ದಾರೆ.