
ಗಾಯದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಇಬ್ಬರು ಪ್ರಮುಖ ಆಟಗಾರರೆಂದರೆ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ. ಆಲ್ರೌಂಡರ್ ರವೀಂದ್ರ ಜಡೇಜಾ ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ಗಾಯಗೊಂಡಿದ್ದರೆ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಭಯ್ಆಸ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರು ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ. ಈಗ ಈ ಇಬ್ಬರು ಆಟಗಾರರು ಕೂಡ ಮತ್ತೆ ಫಿಟ್ನೆಸ್ ಸಾಧಿಸಲು ಅಂಗಳಕ್ಕಿಳಿದಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಇಬ್ಬರು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಈಗ ಬೆಂಗಳುರಿನಲ್ಲಿದ್ದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಾಲೀಮು ಆರಂಭಿಸಿದ್ದಾರೆ. ಇಬ್ಬರು ಆಟಗಾರರು ಕೂಡ ಫಿಟ್ನೆಸ್ ಮರಳಿ ಪಡೆಯುವತ್ತ ಗಮನಹರಿಸಿದ್ದಾರೆ.
ಟೀಮ್ ಇಂಡಿಯಾದ ಸೀಮಿತ ಓವರ್ಗಳ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಈ ಇಬ್ಬರು ಆಟಗಾರರ ಅನುಭವವನ್ನು ಟೆಸ್ಟ್ ಸರಣಿಯಲ್ಲಿ ಭಾರತ ಕಳೆದುಕೊಳ್ಳಲಿದೆ. ಆದರೆ ಪ್ರತಿಭಾವಂತ ಆಟಗಾರರ ಪಡೆ ದಕ್ಷಿಣ ಆಫ್ರಿಕಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದೆ. ಈಗ ಈ ಇಬ್ಬರು ಆಟಗಾರರು ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಸಂಪೂರ್ಣವಾಗಿ ಫಿಟ್ನೆಸ್ ಪಡೆದುಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಭಾರತ ತಂಡದ ಸದಸ್ಯರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಮುಂಬೈನಲ್ಲಿ ಅಭ್ಯಾಸ ಶಿಬಿರದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಸ್ನಾಯು ಸೆಳೆತಕ್ಕೆ ಒಳಗಾದರು. ಹೀಗಾಗಿ ಟೆಸ್ಟ್ ಸರಣಿಯಿಂದ ಹೊರಗುಳಿಯುವುದು ಅನಿವಾರ್ಯವಾಯಿತು. ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಪ್ರಿಯಾಂಕ್ ಪಾಂಚಾಲ್ ಭಾರತೀಯ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದುಕೊಂಡಿದ್ದಾರೆ.
ಇನ್ನು ರವೀಂದ್ರ ಜಡೇಜಾ ಕಳೆದ ನ್ಯೂಜಿಲೆಂಡ್ ತಂಡದ ವಿರುದ್ಧದ ಸರಣಿಯಲ್ಲಿ ಮೊಣಕೈ ಗಾಯಕ್ಕೆ ತುತ್ತಾದರು. ಹೀಗಾಗಿ ಜಡೇಜಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದಲೂ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ಅವರು ಹೊರಗುಳಿಯಬೇಕಾಯಿತು.
ಇನ್ನು ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುತ್ತಿರುವ ವಿಚಾರವಾಗಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಬದಲ್ಲಿ ರೋಹಿತ್ ಶರ್ಮಾ ಸರನಿಯಿಂದ ಹೊರಗುಳಿಯುತ್ತಿರುವುದರಿಂದ ಅವರ ಅನುಭವ ತಂಡಕ್ಕೆ ಲಭ್ಯವಾಗುವುದಿಲ್ಲ ಎಂದಿದ್ದಾರೆ. ಆದರೆ ಈ ಸರಣಿ ಖಂಡಿತವಾಗಿಯೂ ಯುವ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ಗೆ ಉತ್ತಮವಾದ ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.
"ಖಂಡಿತವಾಗಿಯೂ ರೋಹಿತ್ ಶರ್ಮಾ ಅವರಲ್ಲಿನ ಸಾಮರ್ಥ್ಯವನ್ನು ಈ ಸರಣಿಯಲ್ಲಿ ನಾವು ಕಳೆದುಕೊಳ್ಳಲಿದ್ದೇವೆ. ಕಳೆದ ಇಂಗ್ಲೆಂಡ್ ಸರಣಿಯಲ್ಲಿಯೂ ಅವರು ಟೆಸ್ಟ್ ಮಾದರಿಯ ಮೇಲೆ ಕಠಿಣ ಪರಿಶ್ರಮ ಪಡಿತ್ತಿರುವುದನ್ನು ಸಾಬೀತುಪಡಿಸಿದ್ದಾರೆ. ಅವರ ಅನುಭವ ಹಾಗೂ ಕೌಶಲ್ಯದ ಜೊತೆಗೆ ಅವರ ಆಟದ ಗುಣಮಟ್ಟವನ್ನು ಕೂಡ ನಾವು ಕಳೆದುಕೊಳ್ಳಲಿದ್ದೇವೆ" ಎಂದಿದ್ದಾರೆ ವಿರಾಟ್ ಕೊಹ್ಲಿ. "ಆದರೆ ಇದು ಮಯಾಂಕ್ ಹಾಗೂ ರಾಹುಲ್ಗೆ ನಿಜವಾಗಿಯೂ ಮುಂದೆ ಬಂದು ಜವಾಬ್ಧಾರಿ ನಿರ್ವಹಿಸಲುಉತ್ತಮವಾದ ಅವಕಾಶವನ್ನು ನೀಡುತ್ತದೆ. ಕಳೆದ ಸರಣಿಯಲ್ಲಿ ನೀಡಿದ ಪ್ರದರ್ಶನವನ್ನು ಈ ಸರಣಿಯಲ್ಲಿಯೂ ಮುಂದುವರಿಸಲಿದ್ದಾರೆ" ಎಂದು ಕೊಹ್ಲಿ ವಿಶ್ವಾಸದ ಮಾತುಗಳನ್ನು ಆಡಿದ್ದಾರ.