ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರನ್ ಬರ ಅನುಭವಿಸುತ್ತಿದ್ದಾರೆ. ಈ ಸ್ಟಾರ್ ಆಟಗಾರರ ಭವಿಷ್ಯದ ಬಗ್ಗೆ ಚಿಂತನೆಗಳು ನಡೆದಿವೆ. ಇನ್ನು ಈ ಸ್ಟಾರ್ ಆಟಗಾರರಿಗೆ ಕೊನೆಯ ಚಾನ್ಸ್ ನೀಡಲು ಬಿಸಿಸಿಐ ಚರ್ಚೆ ನಡೆಸಿದೆ.
ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ವಿರಾಟ್, ರೋಹಿತ್ಗೆ ಕೊನೆಯ ಅವಕಾಶ ಆಗಿರಲಿದೆ. ಈ ಟೂರ್ನಿಯಲ್ಲಿ ಈ ಇಬ್ಬರೂ ಸ್ಥಿರವಾಗಿ ರನ್ ಕಲೆ ಹಾಕುವಲ್ಲಿ ವಿಫಲರಾದರೆ, ಇವರಿಬ್ಬರಿಗೂ ಗೇಟ್ ಪಾಸ್ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.

ಬಿಸಿಸಿಐ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೊಂದಿಗೆ ಸಮಾಲೋಚನೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ವೇಳೆ ಈ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನೀಡುವಷ್ಟೇ ಮತಹತ್ವವನ್ನು ದೇಶೀಯ ಕ್ರಿಕೆಟ್ಗೂ ನೀಡಬೇಕು ಎಂದು ತಿಳಿಸಿದೆ. ಇನ್ನು ಬಿಸಿಸಿಐ ನೀಡಿರುವ ಈ ಸೂಚನೆಯ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಅವರಿಗೂ ಬಿಸಿಸಿಐ ಇದೇ ಮಾತನ್ನು ಹೇಳಿತ್ತು. ಈಗ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಿಗೂ ಇದೇ ಫಾರ್ಮುಲಾ ಅಪೈಲ್ ಆಗುತ್ತಾ ಎಂಬುದೇ ಕುತೂಹಲ ಮೂಡಿಸಿದೆ. ಬಿಸಿಸಿಐ ಹೇಳಿದ ಮಾತಿಗೂ ಆರಂಭದಲ್ಲಿ ಒತ್ತು ನೀಡಿರಲಿಲ್ಲ. ಆದರೆ ಕ್ರಮೇಣ ಇವರು ಸಹ ದೇಶೀಯ ಟೂರ್ನಿಗಳಲ್ಲಿ ಆಡಲು ಆರಂಭಿಸಿದರು.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಲಯಕ್ಕೆ ಮರಳದೇ ಇದ್ದಲ್ಲಿ ದೊಡ್ಡ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಇವರ ಫಾರ್ಮ್ ಸ್ಥಿರವಾಗಿ ಇಲ್ಲದೇ ಇದ್ದಲ್ಲಿ ಇವರನ್ನು ಬಿಸಿಸಿಐ ತಂಡದಿಂದ ಕೈ ಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ವಿರಾಟ್ ಹಾಗೂ ರೋಹಿತ್ ಸಹ ಫಾರ್ಮ್ ಕಂಡು ಕೊಳ್ಳಲು ದೇಶೀಯ ಟೂರ್ನಿಗಳಲ್ಲಿ ಆಡುವುದು ಅನಿವಾರ್ಯವಾಗುತ್ತದೆ.
ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡದಿರಲು ನಿಖರ ಕಾರಣವನ್ನು ಬಿಸಿಸಿಐಗೆ ನೀಡಬೇಕಾಗುತ್ತದೆ. ಆಟಗಾರರು ದೇಶೀಯ ಕ್ರಿಕೆಟ್ನಿಂದ ದೂರ ಉಳಿದರೆ. ವೈದ್ಯಕೀಯ ಅಥವಾ ಫಿಟ್ನೆಸ್ ವರದಿಯನ್ನು ನೀಡಬೇಕು. ಇಲ್ಲದೇ ಇದ್ದರೆ ಆಟಗಾರ ದಂಡನೇಗೆ ಒಳಗಾಗುತ್ತಾನೆ ಎಂದು ಸಭೆಯಲ್ಲಿ ಚರ್ಚೆಸಲಾಗಿದೆ.