ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ಕೊಂಡಿದೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದ ವಿಶ್ವಕಪ್ನಲ್ಲಿ ರೋಹಿತ್ ಪಡೆ ಅಮೋಘ ಪ್ರದರ್ಶನ ನೀಡಿದೆ. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ಲ್ಯೂ ಬಾಯ್ಸ್ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಆಗ ಭಾರತದಲ್ಲಿ ಸಂಭ್ರಮಾಚರಣೆ ನಡೆಯಿತು. ಕಪ್ ನೊಂದಿಗೆ ತವರಿಗೆ ಮರಳಿದ ರೋಹಿತ್ ಪಡೆಗೆ ಅಭಿಮಾನಿಗಳು ಹೃದಯ ಸ್ಪರ್ಷಿ ಸ್ವಾಗತ ನೀಡಿದರು.
ಈ ಮಹಾ ಟೂರ್ನಿಯಲ್ಲಿ ಹಲವು ಆಟಗಾರರು ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಎಲ್ಲ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡಿದ್ದಾರೆ. ರೋಹಿತ್ ಶರ್ಮಾ ಈ ಬಾರಿ ಟಿ20 ವಿಶ್ವಕಪ್ ಗೆಲುವಿಗೆ ಕಾರಣ ಯಾರು ಎಂದು ಬಹಿರಂಗ ಪಡಿಸಿದ್ದಾರೆ. ಈ ಗೆಲುವಿಗೆ ರೋಹಿತ್ ತ್ರಿಮೂರ್ತಿಗಳಿಗೆ ಶ್ರೇಯಸ್ಸು ನೀಡಿದ್ದಾರೆ.

ತ್ರಿಮೂರ್ತಿಗಳು ಎಂದರೆ ಯಾರು ಎಂದು ನೀವು ಭಾವಿಸಬಹುದು. ನಿಮ್ಮ ಊಹೆಯಂತೆ ಅವರು ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಆಗಿರಬೇಕು. ಆದರೆ ಈ ಆಟಗಾರರಿಗೆ ರೋಹಿತ್ ಶರ್ಮಾ ಗೆಲುವಿನ ಶ್ರೇಯವನ್ನು ನೀಡಿಲ್ಲ. ಬದಲಿಗೆ ಬೇರೆಯವರಿಗೆ ಈ ಗೆಲುವಿನ ಶ್ರೇಯಸ್ಸನ್ನು ನೀಡಿದ್ದಾರೆ.
ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಸಂದರ್ಶನ ನಡೆಸಲಾಯಿತು. ಈ ವೇಳೆ ರೋಹಿತ್ ಟಿ20 ವಿಶ್ವಕಪ್ ಬಗ್ಗೆಯೂ ಮಾತನಾಡಿದ್ದಾರೆ. ಚುಟುಕು ಕ್ರಿಕೆಟ್ನ ಸಾಮ್ರಾಟನಾಗಲು ಕಾರಣರಾದ ಮೂವುರ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದ್ದಾಗಿ ಹೇಳಿದ್ದಾರೆ. ಈ ತ್ರಿಮೂರ್ತಿಗಳ ಸಹಾಯದಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ನಲ್ಲಿ ರೋಹಿತ್ ಶರ್ಮಾ ಅವರಿಗೆ ವರ್ಷದ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಲಾಯಿತು. ರೋಹಿತ್ ಶರ್ಮಾ ಅವರ ಅತ್ಯುತ್ತಮ ಬ್ಯಾಟಿಂಗ್ ಮತ್ತು ಅತ್ಯುತ್ತಮ ನಾಯಕತ್ವಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ವೆಸ್ಟ್ ಇಂಡೀಸ್ನ ಬಾಬ್ರಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ಭಾರತದ ಮೂವರು ಆಟಗಾರರು ನಿವೃತ್ತಿ ಘೋಷಿಸಿದರು. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆಲ್ರೌಂಡರ್ ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.