2024ರ ಜುಲೈ 4, ಹಲವು ಕಾರಣಗಳಿಗಾಗಿ ಭಾರತೀಯ ಕ್ರಿಕೆಟ್ನಲ್ಲಿ ಒಂದು ಐತಿಹಾಸಿಕ ದಿನವಾಗಿ ದಾಖಲಾಯಿತು. ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ನವದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದಾದ್ಯಂತ ಸಿಕ್ಕ ಅದ್ಧೂರಿ ಹಾಗೂ ಅಭೂತಪೂರ್ವ ಸ್ವಾಗತಕ್ಕೆ ಇಡೀ ಕ್ರಿಕೆಟ್ ಲೋಕವೇ ಬೆರಗಾಗಿದೆ.
ಇದೇ ವೇಳೆ ಗುರುವಾರ, ಜುಲೈ 4ರ ರಾತ್ರಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಅಭಿನಂದನಾ ಸಮಾರಂಭದಲ್ಲಿ ಭಾರತ ತಂಡದ ಆಟಗಾರರು ಮತ್ತು ತಂಡದ ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು. ಕೊನೆಯಲ್ಲಿ ಬಿಸಿಸಿಐನಿಂದ 125 ಕೋಟಿ ರೂಪಾಯಿಗಳ ಬಹುಮಾನ ಮೊತ್ತವನ್ನು ಸ್ವೀಕರಿಸಿತು.

ವಾಂಖೆಡೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು 2024ರ ಟಿ20 ವಿಶ್ವಕಪ್ ಟ್ರೋಫಿಯನ್ನು ಇಡೀ ದೇಶಕ್ಕೆ ಸಮರ್ಪಿಸಿದರು.
"ಈ ಟ್ರೋಫಿ ಇಡೀ ರಾಷ್ಟ್ರಕ್ಕೆ ಸಮರ್ಪಿತ. ದೇಶವನ್ನು ಪ್ರತಿನಿಧಿಸಿದ ಎಲ್ಲಾ ಆಟಗಾರರ ಜೊತೆಗೆ, 11 ವರ್ಷಗಳಿಂದ ಕಾಯುತ್ತಿರುವ ನಮ್ಮ ಅಭಿಮಾನಿಗಳಿಗೆ ಅರ್ಪಿಸಲು ಬಯಸುತ್ತೇವೆ," ಎಂದು ರೋಹಿತ್ ಶರ್ಮಾ ತಿಳಿಸಿದರು.

ಪ್ರತಿಕೂಲ ಹವಾಮಾನದಿಂದಾಗಿ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರರು ಗುರುವಾರ, ಜುಲೈ 4ರ ಮುಂಜಾನೆ ನವದೆಹಲಿಗೆ ಬಂದಿಳಿದರು.
ನಂತರ ಭಾರತ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಯಿತು ಮತ್ತು ಅಲ್ಲಿಂದ ನೇರವಾಗಿ ಮುಂಬೈಗೆ ಪ್ರಯಾಣಿಸಿ ವಾಂಖೆಡೆಯಲ್ಲಿ ಅಭಿನಂದನಾ ಸಮಾರಂಭಕ್ಕೂ ಮುನ್ನ ಮುಂಬೈನ ಮರೀನ್ ಡ್ರೈವ್ನಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿತು.

ಮುಂಬೈನಲ್ಲಿನ ಪ್ರೇಕ್ಷಕರು ಮತ್ತು ದೇಶದ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಅಚಲ ಬೆಂಬಲಕ್ಕಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಶ್ಲಾಘಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
"ಮುಂಬೈ ಎಂದಿಗೂ ನಿರಾಶೆಗೊಳಿಸುವುದಿಲ್ಲ. ನಮಗೆ ಅದ್ಭುತವಾದ ಸ್ವಾಗತ ಸಿಕ್ಕಿತು. ತಂಡದ ಪರವಾಗಿ ನಾವು ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನನಗೆ ತುಂಬಾ ಸಂತೋಷವಾಗಿದೆ ಮತ್ತು ಸಮಾಧಾನವಾಗಿದೆ," ಎಂದು ರೋಹಿತ್ ಶರ್ಮಾ ಸಮಾರಂಭದಲ್ಲಿ ತಿಳಿಸಿದರು.
2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದ ಅಂತಿಮ ಓವರ್ ಬೌಲ್ ಮಾಡಿದ ಆಲ್ರೌಂಡರ್ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ರೋಹಿತ್ ಶರ್ಮಾ ಭಾರಿ ಪ್ರಶಂಸೆ ವ್ಯಕ್ತಪಡಿಸಿದರು.
ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಲು ಭಾರತವು 7 ರನ್ಗಳ ರೋಚಕ ಗೆಲುವನ್ನು ದಾಖಲಿಸಿದಾಗ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ಗಳನ್ನು ಕಬಳಿಸಿ ಎದುರಾಳಿ ತಂಡದಿಂದ ಗೆಲುವು ಕಸಿದುಕೊಂಡರು.
"ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕಾಗಿ ಅಂತಿಮ ಓವರ್ ಬೌಲಿಂಗ್ ಮಾಡುತ್ತಿದ್ದರು. ಕೊನೆಯ ಓವರ್ ಬೌಲಿಂಗ್ ಮಾಡಿದ್ದಕ್ಕಾಗಿ ಅವರಿಗೆ ಹ್ಯಾಟ್ಸ್ ಆಫ್. ನಿಮಗೆ ಗೊತ್ತಿರಲಿ, ಎಷ್ಟೇ ರನ್ ರಕ್ಷಿಸಿಕೊಳ್ಳಬೇಕಿದ್ದರೂ ಆ ಕೊನೆಯ ಓವರ್ ಬೌಲ್ ಮಾಡಲು ಯಾವಾಗಲೂ ತುಂಬಾ ಒತ್ತಡ ಇರುತ್ತದೆ. ಆದರೆ ಹಾರ್ದಿಕ್ ಪಾಂಡ್ಯಗೆ ಹ್ಯಾಟ್ಸ್ ಆಫ್," ಎಂದು ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಮುಖದಲ್ಲಿ ಮಂದಹಾಸ ಹೊಂದಿದ್ದರು ಮತ್ತು ಎದ್ದುನಿಂತು ಕೈ ಬೀಸುತ್ತಿದ್ದಂತೆ, ವಾಂಖೆಡೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ಜಪಿಸಲು ಪ್ರಾರಂಭಿಸಿದರು.