
ಟಿ20 ನಾಯಕನಾಗುವ ವೇಳೆ ಈ ಷರತ್ತು ಹಾಕಿದ್ರು ರೋಹಿತ್ ಶರ್ಮಾ
ವರದಿಯೊಂದು ಹೇಳುವ ಪ್ರಕಾರ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವೀಕರಿಸುವ ಮುನ್ನ ಆಯ್ಕೆಗಾರರ ಜತೆ ನಡೆಸಿದ ಚರ್ಚೆಯಲ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ನೀಡಿದರೆ ಮಾತ್ರ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕನಾಗುತ್ತೇನೆ ಎಂದಿದ್ದರು. ಹೀಗೆ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗುವುದು ಮಾತ್ರವಲ್ಲದೇ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಬಯಸಿದ್ದರು ಎಂಬ ಸುದ್ದಿ ಇದೀಗ ಹೊರಬಿದ್ದು ವೈರಲ್ ಆಗಿದೆ.

2018ರ ಸಮಯದಲ್ಲಿಯೂ ನಾಯಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು ರೋಹಿತ್!
ಸದ್ಯ ಭಾರತ ಟಿ ಟ್ವೆಂಟಿ ನಾಯಕನಾಗುವ ಸಮಯದಲ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ರೋಹಿತ್ ಬಯಸಿದ್ದರು ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಈ ಹಿಂದೆ ನಾಯಕತ್ವದ ಕುರಿತು ರೋಹಿತ್ ಶರ್ಮಾ ನೀಡಿದ್ದ ಹೇಳಿಕೆಯೊಂದನ್ನು ಕೂಡ ಕ್ರಿಕೆಟ್ ಅಭಿಮಾನಿಗಳು ಮೆಲುಕು ಹಾಕಿದ್ದಾರೆ. ಹೌದು, 2018ರ ಏಷ್ಯಾ ಕಪ್ ನಡೆಯುವ ವೇಳೆ ವಿರಾಟ್ ಕೊಹ್ಲಿ ಭಾರತ ತಂಡದಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲಿಸಿದ್ದರು. ಹೀಗೆ ನಾಯಕನಾಗಿ ಭಾರತ ತಂಡವನ್ನು ಆ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾ ಸುದ್ದಿಗೋಷ್ಠಿಯ ವೇಳೆ ಮಾತನಾಡುವಾಗ ಮುಂದಿನ ದಿನಗಳಲ್ಲಿ ಭಾರತ ಏಕದಿನ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಕೆಲಸ ನಿರ್ವಹಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಏಕದಿನ ನಾಯಕತ್ವ ಬದಲಾವಣೆ ಕುರಿತು ಗಂಗೂಲಿ ಹೇಳಿದ್ದಿಷ್ಟು
ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊದಲಿಗೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧಾರ ಕೈಗೊಂಡಾಗ ಬಿಸಿಸಿಐ ಬೇಡ ಎಂದು ಮನವಿ ಮಾಡಿಕೊಂಡಿತ್ತು ಎಂದರು. ಆದರೂ ಸಹ ಬಿಸಿಸಿಐ ಸಲಹೆಗೆ ಒಪ್ಪಿಗೆ ಸೂಚಿಸದ ಕೊಹ್ಲಿ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು ಮತ್ತು ಬಿಸಿಸಿಐ ಆಯ್ಕೆ ಸಮಿತಿ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಾದ ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳಿಗೂ ಪ್ರತ್ಯೇಕ ನಾಯಕರ ಬದಲು ಏಕೈಕ ನಾಯಕನನ್ನು ಹೊಂದುವುದು ಸೂಕ್ತ ಎನಿಸಿ ರೋಹಿತ್ ಶರ್ಮಾರನ್ನು ಭಾರತ ಏಕದಿನ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಿದರು ಎಂದು ಗಂಗೂಲಿ ನಾಯಕತ್ವ ಬದಲಾವಣೆಗೆ ಸ್ಪಷ್ಟನೆ ನೀಡಿದರು.


Click it and Unblock the Notifications
