
ಒತ್ತಡವನ್ನು ನಿಭಾಯಿಸುವುದು ಮುಖ್ಯ
"ಸೆಮಿಫೈನಲ್ ಹಂತದಲ್ಲಿ ಒತ್ತಡವನ್ನು ನಿಭಾಯಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಒತ್ತಡವನ್ನು ನಿಭಾಯಿಸುವ ವಿಚಾರವಾಗಿ ಹೇಳಿಕೊಡಲು ಸಾಧ್ಯವಿಲ್ಲ. ನಮ್ಮ ಆಟಗಾರರು ಐಪಿಎಲ್ನಲ್ಲಿ ಪ್ಲೇಆಫ್ ಆಡಿದ ಅನುಭವ ಹೊಂದಿದ್ದಾರೆ. ಅವೆಲ್ಲವೂ ಸಾಕಷ್ಟು ಒತ್ತಡವಿರುವಂತಾ ಪಂದ್ಯಗಳಾಗಿದೆ. ಹಾಗಾಗಿ ಅವರಿಗೆ ಒತ್ತಡಗಳನ್ನು ನಿಭಾಯಿಸುವ ಅನುಭವವಿದೆ. ಆದರೆ ಈ ಪಂದ್ಯದಲ್ಲಿ ನಾವು ಬೌಲಿಂಗ್ ದಾಳಿಯನ್ನು ಆರಂಭಿಸಿದ ರೀತಿಯಲ್ಲಿ ಎಡವಿದೆವು. ಅಳುಕಿನಿಂದಲೇ ನಾವು ಬೌಲಿಂಗ್ ನಡೆಸಿದೆವು. ಇದಕ್ಕೆ ಇಂಗ್ಲೆಂಡ್ನ ಆರಂಭಿಕರಿಗೂ ನಾವು ಶ್ರೇಯಸ್ಸು ನೀಡಬೇಕಿದೆ. ಅವರು ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದರು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಬೌಲಿಂಗ್ ವೈಫಲ್ಯ ಉಲ್ಲೇಖಿಸಿದ ರೋಹಿತ್
ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ಬೌಲಿಂಗ್ನಲ್ಲಿ ಭಾರತ ಹೇಗೆ ವೈಫಲ್ಯತೆ ಅನುಭವಿಸಿತು ಎಂದಿದ್ದಾರೆ. "ಭುವಿ ಮೊದಲ ಓವರ್ ಮಾಡಿದಾಗ ಚೆಂಡು ಉತ್ತಮವಾಗಿ ಸ್ವಿಂಗ್ ಆಗುತ್ತಿತ್ತು. ಆದರೆ ಅದು ಸೂಕ್ತ ಸ್ಥಳದಲ್ಲಿ ಬೀಳುತ್ತಿರಲಿಲ್ಲ. ಇಂಥಾ ಸಂದರ್ಭದಲ್ಲಿ ನಾವು ಎದುರಾಳಿಗಳಿಗೆ ಸವಾಲಾಗುವಂತಾ ಸ್ಥಳಗಳಿಗೆ ಚೆಂಡೆಸೆಯಬೇಕಾಗಿತ್ತು. ಆದರೆ ನಾವು ಅವರಿಗೆ ರನ್ಗಳಿಸಲು ಅವಕಾಶ ಮಾಡಿಕೊಟ್ಟೆವು. ಕೆಲ ಭಾಗಗಳಲ್ಲಿ ಬೌಂಡರಿ ಹತ್ತಿರವಿದ್ದ ಕಾರಣ ಬ್ಯಾಟರ್ಗಳಿಗೆ ಸವಾಲೊಡ್ಡಬೇಕಾಗಿತ್ತು. ಹಾಗಿದ್ದರೂ ರನ್ ಬಂದಿದ್ದರೆ ಅದನ್ನು ಒಪ್ಪಬಹುದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ" ಎಂದಿದ್ದಾರೆ ರೋಹಿತ್ ಶರ್ಮಾ

ಪೈಪೋಟಿ ನೀಡದೆಯೇ ಸೋತ ಭಾರತ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆರಂಭಿಕರ ವೈಫಲ್ಯದಿಂದಾಗಿ ಆರಂಭದಲ್ಲಿ ಎಡವಿದರೂ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ನೆರವಾದರು, ಇದರ ಪರಿಣಾಮವಾಗಿ ಭಾರತ ಈ ಪಂದ್ಯದಲ್ಲಿ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ಕೊಹ್ಲಿ ಹಾಗೂ ಪಾಂಡ್ಯ ಇಬ್ಬರು ಕೂಡ ತಲಾ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಅದರಲ್ಲೂ ಪಾಂಡ್ಯ ಕೇವಲ 33 ಎಸೆತಗಳಲ್ಲ 63 ರನ್ ಸಿಡಿಸಿ ಭಾರತದ ಮೊತ್ತ ಹೆಚ್ಚಲು ಕಾರಣವಾದರು. ಇಂಗ್ಲೆಂಡ್ಗೆ 169 ರನ್ಗಳ ಗುರಿಯನ್ನು ಭಾರತ ನಿಗದಿಪಡಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಯಾವ ಹಂತದಲ್ಲಿಯೂ ಒತ್ತಡಕ್ಕೆ ಸಿಲುಕದರೆ ವಿಕೆಟ್ ಕಳೆದುಕೊಳ್ಳದೆಯೇ ಬೆನ್ನಟ್ಟಿತು. ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಅಜೇಯವಾಗುಳಿದು ಭಾರತಕ್ಕೆ ಸೋಲಿನ ಆಘಾತ ನೀಡಿದ್ದಲ್ಲದೆ ಕೋಟ್ಯಂತರ ಭಾರತೀಯ ಅಭಿಮಾನಿಗಳ ಕನಸನ್ನು ಭಗ್ನಗೊಳಿಸಿದರು.


Click it and Unblock the Notifications
