ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಐಸಿಸಿ ಮೆಗಾ ಟೂರ್ನಿಯಲ್ಲೂ ಟೀಮ್ ಇಂಡಿಯಾವನ್ನು ಹಿಟ್ ಮ್ಯಾನ್ ಖ್ಯಾತಿಯ ರೋಗಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈ ಟೂರ್ನಿಗೆ ಶನಿವಾರ ತಂಡವನ್ನು ಪ್ರಕಟಿಸಲಾಗಿತ್ತು. ಈಗ ಈ ಟೂರ್ನಿಗೆ ಸಿದ್ಧತೆಗಳು ನಡೆದಿವೆ. ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಂಟು ತಂಡಗಳಲ್ಲಿ ಒಂದಾಗಿದೆ. ಹೀಗಾಗಿ ಟೀಮ್ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡ.
ನಾಯಕ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯವನ್ನು ಗೆದ್ದಿತ್ತು. ಈ ಮೂಲಕ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಗೆ ಭಾರತಕ್ಕೆ ಗೆದ್ದಿತ್ತು. ಈಗ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮತ್ತೊಂದು ದೊಡ್ಡ ಹೇಳಿಕೆ ನೀಡಿದ್ದಾರೆ.

ಭಾನುವಾರ (ಜ.19) ಮುಂಬೈನ ವಾಂಖೆಡೆ ಅಂಗಳದ 50ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಟಿ20 ವಿಶ್ವಕಪ್ ವಿಜಯದ ಬಗ್ಗೆ ಹಾಗೂ ಮುಂಬರುವ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಟಿ20 ವಿಶ್ವಕಪ್ ಗೆಲುವಿನಂತೆ ಮತ್ತೊಂದು ಗೆಲುವನ್ನು ಆಚರಿಸಲು ಬಯಸುತ್ತೇನೆ ಎಂದು ರೋಹಿತ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪತ್ರಕರ್ತರು ರೋಹಿತ್ ಶರ್ಮಾ ಅವರಿಗೆ ನೀವು ಟಿ20 ವಿಶ್ವಕಪ್ ಗೆದ್ದ ಬಗ್ಗೆ ಅರಿವಿದೆಯಾ ಎಂದು ಕೇಳಿದರು. ಈ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ ಹಿಟ್ ಮ್ಯಾನ್, ನಾನು ಮುಂಬೈನ ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಿದ ಬಳಿಕ ಮರುದಿನ ಬೆಳಗ್ಗೆ ಎದ್ದಾಗಲೇ ನಾನು ವಿಶ್ವಕಪ್ ಗೆದ್ದ ಅನುಭವ ಆಗಿದ್ದು. ನಿದ್ದೆಯಿಂದ ಎದ್ದಾಗಲೇ ನಾವು ಮಾಡಿದ ವಿಶೇಷ ಸಾಧನೆ ಎಂತಹದ್ದು ಎಂದು ಅರಿವಾಯಿತು ಎಂದು ತಿಳಿಸಿದ್ದಾರೆ.

ವಿಶ್ವಕಪ್ ಗೆಲ್ಲುವುದು ಒಂದು ಸಾಧನೆ. ಈ ಸಂಭ್ರಮವನ್ನು ನಿಮ್ಮ ಜನರೊಂದಿಗೆ ಅನುಭವಿಸುವುದು ವಿಶೇಷ. ತಂಡದೊಂದಿಗೂ ನೀವು ಗೆಲುವಿನ ಸಂಭ್ರಮಾಚರಣೆ ನಡೆಸುತ್ತೀರಿ. ಆದರೆ ಕ್ರಿಕೆಟ್ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸಿದ್ದು ನಿಜಕ್ಕೂ ನೆನಪಿನಲ್ಲಿ ಮಾಸದ ಕ್ಷಣ. ಮುಂಬೈಗೆ ಬಂದ ಬಳಿಕ ಇದರ ಅರಿವಾಯಿತು ಎಂದು ತಿಳಿಸಿದ್ದಾರೆ.
ನಾವು ಇನ್ನೊಂದು ಟೂರ್ನಿಗೆ ಸಿದ್ಧರಾಗಲಿದ್ದೇವೆ. ನಾವು ದುಬೈನಲ್ಲಿ ಅಂಗಳ ಪ್ರವೇಶಿಸಿದಾಗ ನನಗೆ ವಿಶ್ವಾಸವಿದೆ, ಭಾರತದ 140 ಕೋಟಿ ಜನ ನಮ್ಮ ಬೆಂಬಲಕ್ಕೆ ನಿಲ್ಲುತಾರೆ ಎಂದು. ನಾವು ಈ ಟ್ರೋಫಿಯನ್ನು ಸಹ ಮರಳಿ ಭಾರತಕ್ಕೆ ತರುವ ಪ್ರಯತ್ನ ಮಾಡುವುದಾಗಿ ರೋಹಿತ್ ತಿಳಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಅವರು ಸಿಡ್ನಿ ಟೆಸ್ಟ್ನಿಂದ ದೂರ ಉಳಿಯಬೇಕಾಯಿತು. ಬಿಸಿಸಿಐ ಹಿರಿಯ ಆಟಗಾರರಿಗೆ ರಣಜಿ ಟ್ರೋಫಿಯಲ್ಲಿ ಆಡುವಂತೆ ಸೂಚನೆ ನೀಡುತ್ತಿದ್ದಂತೆ, ರೋಹಿತ್ ಎಚ್ಚೆತ್ತುಕೊಂಡು ಅಭ್ಯಾಸ ಆರಂಭಿಸಿದ್ದಾರೆ.