ಭಾನುವಾರ, ಅಕ್ಟೋಬರ್ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನ 29ನೇ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 100 ರನ್ಗಳಿಂದ ಗೆಲುವು ದಾಖಲಿಸಿತು.
ಭಾರತ ತಂಡದ ಪರ 101 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ನಿರ್ಣಾಯಕ 87 ರನ್ ಗಳಿಸಿದ ನಾಯಕ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಲಕ್ನೋದ ಮೈದಾನದ ಪಿಚ್ ತುಂಬಾ ಕಠಿಣವಾಗಿತ್ತು. ಹೀಗಾಗಿ ರೋಹಿತ್ ಶರ್ಮಾ ಅವರ ಪ್ರದರ್ಶನ ಸಹಾಯಕವಾಗಿತ್ತು.
ರೋಹಿತ್ ಶರ್ಮಾ ಅಂತಿಮವಾಗಿ ಲೆಗ್ ಸೈಡ್ನಲ್ಲಿ ಲಾಫ್ಟೆಡ್ ಶಾಟ್ ಆಡಲು ಪ್ರಯತ್ನಿಸಿದಾಗ ಆದಿಲ್ ರಶೀದ್ ಬೌಲಿಂಗ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ಗೆ ಕ್ಯಾಚ್ ನೀಡಿ ಔಟಾದರು. ಈ ಮೂಲಕ ಏಕದಿನ ವಿಶ್ವಕಪ್ನ 8ನೇ ಶತಕ ತಪ್ಪಿಸಿಕೊಂಡರು.
ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೆರವಿನಿಂದ ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಆ ಬಳಿಕ ಭಾರತದ ಬೌಲರ್ಗಳು ತಮ್ಮ ಎದುರಾಳಿಗಳನ್ನು 34.5 ಓವರ್ಗಳಲ್ಲಿ 129 ರನ್ಗಳಿಗೆ ಆಲೌಟ್ ಮಾಡಿ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರೆಸಿದರು.

ರೋಹಿತ್ ಶರ್ಮಾ 2015ರಿಂದ ಏಕದಿನ ವಿಶ್ವಕಪ್ನ ತಮ್ಮ 23ನೇ ಪಂದ್ಯದಲ್ಲಿ ಏಳನೇ ಬಾರಿಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದರು. ಇದು ಆರು ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದ ಆಸ್ಟ್ರೇಲಿಯಾದ ಲೆಜೆಂಡ್ ವೇಗಿ ಗ್ಲೆನ್ ಮೆಕ್ಗ್ರಾತ್ ಅವರನ್ನು ಹಿಂದಿಕ್ಕಿದರು.
36 ವರ್ಷದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಲು ಬಯಸುತ್ತಿದ್ದಾರೆ. ಅದು ಯಾವುದೇ ರೀತಿಯಲ್ಲಿ ಸುಲಭವಲ್ಲ. ಏಕೆಂದರೆ, ಸಚಿನ್ ತೆಂಡೂಲ್ಕರ್ ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ (9) ಪಡೆದ ದಾರ್ವಕಾಲಿಕ ದಾಖಲೆ ಹೊಂದಿದ್ದಾರೆ.
ರೋಹಿತ್ ಶರ್ಮಾಗೆ ಭಾರತದ ಮಾಜಿ ಆಟಗಾರರನ್ನು ಸರಿಗಟ್ಟುವ ಅವಕಾಶವಿದೆ. ಕಪಿಲ್ ದೇವ್ ಅವರ ವಿಶ್ವಕಪ್ನಲ್ಲಿ ಭಾರತೀಯ ಬ್ಯಾಟರ್ಗಳ ವೇಗದ ಶತಕದ ದಾಖಲೆಯನ್ನು ಮುರಿದ ನಂತರ, ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧ ತಮ್ಮ ಮೊದಲ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಗೆದ್ದರು.
ಇದೀಗ ರೋಹಿತ್ ಶರ್ಮಾ ಆಂಗ್ಲ ತಂಡದ ವಿರುದ್ಧ ಮತ್ತೊಂದು ಪಂದ್ಯ-ವಿಜೇತ ಪ್ರದರ್ಶನದೊಂದಿಗೆ ತಂಡವನ್ನು ಗೆಲ್ಲಿಸಿದರು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಗುರುವಾರ, ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎದುರಿಸಲಿದೆ ಮತ್ತು ರೋಹಿತ್ ಶರ್ಮಾ ತನ್ನ ಅವಕಾಶಗಳನ್ನು ಬಳಸಿಕೊಳ್ಳಲು ಎದುರು ನೋಡುತ್ತಾನೆ.