ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಮೊದಲ ಟೆಸ್ಟ್ ಬೆಂಗಳೂರಿನ ನಡೆದಿತ್ತು. ಈ ಪಂದ್ಯದಲ್ಲಿ ಪ್ರವಾಸಿ ಕಿವೀಸ್ 8 ವಿಕೆಟ್ಗಳಿಂದ ಗೆಲುವು ದಾಖಲಿಸಿತ್ತು. ಈಗ ಉಭಯ ತಂಡಗಳು ಪುಣೆಯತ್ತ ಮುಖ ಮಾಡಿವೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಗುರಿಯನ್ನು ಹೊಂದಿದೆ. ಈ ಪಂದ್ಯವನ್ನು ಗೆದ್ದರೆ ಟೆಸ್ಟ್ ಸರಣಿಯನ್ನು ಗೆಲ್ಲಬಹುದು. ಎರಡನೇ ಟೆಸ್ಟ್ ಪಂದ್ಯಕ್ಕಾಗಿ ರೋಹಿತ್ ಶರ್ಮಾಗೆ ಹೊಸ ಟೆನ್ಷನ್ ಆರಂಭವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ರೇಸ್ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ ಫೈನಲ್ಗೆ ಇನ್ನು ಅರ್ಹತೆಯನ್ನು ಪಡೆದಿಲ್ಲ. ಹೀಗಾಗಿ ಮುಂದಿನ ಎಲ್ಲ ಪಂದ್ಯಗಳೂ ನಿರ್ಣಾಯಕವಾಗಿರಲಿವೆ. ಎರಡನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಯಾವ ಪ್ಲೇಯಿಂಗ್ ಇಲೆವೆನ್ನೊಂದಿಗೆ ಮೈದಾನಕ್ಕೆ ಇಳಿಯುತ್ತದೆ ಎಂಬ ಚಿಂತೆ ಎಲ್ಲರಲ್ಲೂ ಮನೆ ಮಾಡಿದೆ. ಎರಡನೇ ಟೆಸ್ಟ್ನಲ್ಲಿ ತಂಡದಲ್ಲಿ ಬದಲಾವಣೆ ಸಾಧ್ಯತೆ ದಟ್ಟವಾಗಿದೆ.

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಕೆಎಲ್ ರಾಹುಲ್ ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇಷ್ಟೆಲ್ಲಾ ಆದ್ರೂ ನಾಯಕ ರೋಹಿತ್ ಶರ್ಮಾ ಇವರನ್ನು ಬ್ಯಾಕ್ ಮಾಡುತ್ತಲೇ ಬಂದಿದ್ದಾರೆ. ಮೊದಲ ಟೆಸ್ಟ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ರಾಹುಲ್ಗೆ ಎರಡನೇ ಟೆಸ್ಟ್ನಲ್ಲಿ ಆಡುವ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆಗಳು ಎದ್ದಿವೆ.
ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ಸೇರಿಕೊಂಡಿದ್ದ ಯುವ ಆಟಗಾರ ಸರ್ಫರಾಜ್ ಖಾನ್ ಅಮೋಘವಾಗಿ ಬ್ಯಾಟಿಂಗ್ ನಡೆಸಿ 150 ರನ್ ಸಿಡಿಸಿದ್ದರು. ಇವರ ಈ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನದ ಬಳಿಕ ಇವರನ್ನು ತಂಡದಿಂದ ಕೈ ಬಿಡುವುದು ಅಸಾಧ್ಯ ಎಂಬಂತೆ ಕಾಣುತ್ತಿದೆ. ಹೀಗಾಗಿ ರಾಹುಲ್ ಸ್ಥಾನ ತೂಗುಯ್ಯಾಲೆಯಲ್ಲಿದೆ.
ಶುಭಮನ್ ಗಿಲ್ ಫಿಟ್ ಆಗಿ ಮೈದಾನಕ್ಕೆ ಇಳಿದರೆ, ಎಲ್ಲರ ಕಣ್ಣು ರಾಹುಲ್ ಅವರ ಮೇಲೆ ನೆಟ್ಟಿರುತ್ತದೆ. ಇವರಿಗೆ ಟೀಮ್ ಮ್ಯಾನೇಜ್ಮೆಂಟ್ ಬೆಂಚ್ ಹಾದಿಯನ್ನು ತೋರಿಸುತ್ತದಾ ಎಂಬುದನ್ನು ಕಾದು ನೋಡಬೇಕಿದೆ. ಆದರೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್, ಸತತವಾಗಿ ಅವಕಾಶಗಳನ್ನು ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಇವರ ಫಾರ್ಮ್ ನಿಜಕ್ಕೂ ತಂಡದ ಚಿತೆಯನ್ನು ಹೆಚ್ಚಿಸಿದೆ. ಇವರು ಇತ್ತೀಚಿಗೆ ಭಾರತದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು.

ಮೊದಲ ಟೆಸ್ಟ್ ಪಂದ್ಯದ ಬಳಿಕ ಬಿಸಿಸಿಐ ತಂಡದಲ್ಲಿ ಬದಲಾವಣೆ ಮಾಡಿದೆ. ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಇವರಿಗೆ ಎರಡನೇ ಟೆಸ್ಟ್ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.