
ದುಬೈ: ಭಾರತದ ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ಪರಿಷ್ಕೃತ ತಂಡಗಳು ಪ್ರಕಟಗೊಂಡಿವೆ. ಭಾರತ ಟೆಸ್ಟ್ ತಂಡಕ್ಕೆ ಅಜಿಂಕ್ಯ ರಹಾನೆ ಉಪನಾಯಕರಾಗಿ ಹೆಸರಿಸಲಾಗಿದೆ. ಆದರೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾಗೆ ಟೆಸ್ಟ್ ನಾಯಕತ್ವ ನೀಡಬೇಕೆಂದು ಭಾರತದ ಮಾಜಿ ವೇಗಿ, ಆಲ್ ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಡೆಯಲಿರುವ ಮೊದಲನೇ ಟೆಸ್ಟ್ (ಪಿಂಕ್ ಬಾಲ್) ನಲ್ಲಿ ಎಂದಿನ ವಿರಾಟ್ ಕೊಹ್ಲಿ ನಾಯಕರಾಗಿ ಇರಲಿದ್ದಾರೆ. ಆ ಬಳಿಕ ಕೊಹ್ಲಿಗೆ ಪಿತೃತ್ವ ರಜೆ ನೀಡಲಾಗುತ್ತದೆ. ಹೀಗಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಂಥ ಫಾರ್ಮ್ ತೋರಿಸಿಲ್ಲ. ಶರ್ಮಾ ಗಾಯಕ್ಕೀಡಾಗಿದ್ದರು ಕೂಡ. ರೋಹಿತ್ ಗಿಂತ ರಹಾನೆಗೆ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಕಡಿಮೆ ಅವಕಾಶ ಸಿಕ್ಕಿತ್ತಾದರೂ ರಹಾನೆ ಅದನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಗಮನ ಸೆಳೆದುಕೊಂಡಿದ್ದರು.
'ಕೊಹ್ಲಿ ತಂಡದಲ್ಲಿ ಇಲ್ಲದಿರುವುದು ತಂಡಕ್ಕೆ ದೊಡ್ಡ ಪರಿಣಾಮ ಬೀರಲಿದೆ. ಹಾಗಂತ ಕೊಹ್ಲಿ ನಿರ್ಧಾರ ಗೌರವಿಸಬೇಕು. ಆದರೆ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ಗೆ ನಾಯಕತ್ವ ನೀಡಬೇಕಿತ್ತು. ನಾನು ರಹಾನೆಗೆ ವಿರುದ್ಧವಲ್ಲ. ರೋಹಿತ್ ನಾಯಕತ್ವವನ್ನು ಸಾಬೀತು ಪಡಿಸಿದ್ದಾರೆ. ಅದಕ್ಕೆ ಬೇಕಾದ ಅನುಭವವೂ ಅವರಲ್ಲಿದೆ,' ಎಂದು ಪಿಟಿಐ ಜೊತೆ ಮಾತನಾಡಿದ ಪಠಾಣ್ ಹೇಳಿದ್ದಾರೆ.