ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಉಭಯ ತಂಡಗಳು ಮಾರ್ಚ್ 4 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಒಂದೇ ಕ್ರೀಡಾಂಗಣದಲ್ಲಿ ಆಡುತ್ತಿದ್ದು, ಅದರಿಂದ ಲಾಭ ಪಡೆಯುತ್ತಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. 2025 ರ ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುವ ಮೂಲಕ ಭಾರತ ತಂಡ ಪ್ರಯೋಜನವನ್ನು ಪಡೆದುಕೊಂಡಿದೆ ಎಂಬ ಹೇಳಿಕೆಗಳನ್ನು ಈಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿರಸ್ಕರಿಸಿದ್ದಾರೆ.
ದುಬೈನಲ್ಲಿ ನಡೆದ ಎ ಗುಂಪಿನ ಪಂದ್ಯಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸುಲಭವಾಗಿ ಸೋಲಿಸುವ ಮೂಲಕ ಭಾರತ ಸೆಮಿಫೈನಲ್ ಪ್ರವೇಶಿಸಿತು. ಈಗ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದ ಮುನ್ನಾದಿನ ರೋಹಿತ್ ಶರ್ಮಾ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

ದುಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ಗಳು ಪ್ರತಿ ಪಂದ್ಯದಲ್ಲೂ ಹೊಸ ಸವಾಲುಗಳನ್ನು ಒಡ್ಡುತ್ತವೆ. ಇದರಿಂದಾಗಿ ತಂಡವು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಿದೆ. ಪಿಚ್ನಲ್ಲಿ ನಿರಂತರ ಬದಲಾವಣೆಗಳಾಗುತ್ತಿವೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ನ ಮಾಜಿ ನಾಯಕರಾದ ನಾಸರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಸೇರಿದಂತೆ ಹಲವು ಕ್ರಿಕೆಟ್ ಪಂಡಿತರು ಭಾರತ ತಂಡ ದುಬೈನ ಒಂದೇ ಪಿಚ್ನಲ್ಲಿ ಆಡುವ ಮೂಲಕ ಅನುಕೂಲಗಳನ್ನು ಪಡೆಯುತ್ತಿದೆ ಎಂದು ಆರೋಪಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪಕ್ಷಪಾತದಿಂದ ಕೂಡಿದೆ ಎಂದು ಪಾಕಿಸ್ತಾನದ ಅನೇಕ ಮಾಜಿ ಕ್ರಿಕೆಟಿಗರು ಆರೋಪಿಸಿದ್ದರು.
ಇದಕ್ಕೆ ಪ್ರಕ್ರಿಯಿಸಿದ ರೋಹಿತ್, 'ಇಲ್ಲ, ನೋಡಿ, ನಾವು ಆಡಿದ ಮೂರು ಪಂದ್ಯಗಳಲ್ಲೂ ಮೈದಾನ ಒಂದೇ ಆಗಿತ್ತು. ಆದರೆ ಪಿಚ್ ಮೂರು ಪಂದ್ಯಗಳಲ್ಲೂ ವಿಭಿನ್ನವಾಗಿ ವರ್ತಿಸಿತು. ಸೆಮಿಫೈನಲ್ ಯಾವ ಪಿಚ್ನಲ್ಲಿ ನಡೆಯಲಿದೆ ಎಂದು ನಮಗೆ ತಿಳಿದಿಲ್ಲ. ಆದರೆ ಅದು ಏನೇ ಇರಲಿ, ನಾವು ನಮ್ಮನ್ನು ಹೊಂದಿಕೊಳ್ಳಬೇಕು ಮತ್ತು ಏನಾಗುತ್ತಿದೆ ಎಂದು ನೋಡಬೇಕು. ನಾವು ಅದರ ಮೇಲೆ ಆಡುತ್ತೇವೆ ಎಂದು ಟಕ್ಕರ್ ಕೊಟ್ಟಿದ್ದಾರೆ.
ದುಬೈ ಪಿಚ್ ನಮಗೆ ಹೊಸದು. ಇದು ನಮ್ಮ ಮನೆ ಅಲ್ಲ. ಅದಕ್ಕಾಗಿಯೇ ನಾವು ಇಲ್ಲಿ ಹೆಚ್ಚು ಪಂದ್ಯಗಳನ್ನು ಆಡುವುದಿಲ್ಲ. ನ್ಯೂಜಿಲೆಂಡ್ ವಿರುದ್ಧ ಬೌಲರ್ಗಳು ಬೌಲಿಂಗ್ ಮಾಡುವಾಗ, ಅವರ ಚೆಂಡುಗಳು ಸೀಮ್ ಆಗುತ್ತಿದ್ದವು ಮತ್ತು ಸ್ವಲ್ಪ ಸ್ವಿಂಗ್ ಆಗುತ್ತಿದ್ದವು ಎಂದು ನೋಡಿದ್ದೇವೆ. ನಮ್ಮ ಬೌಲರ್ಗಳು ಬೌಲಿಂಗ್ ಮಾಡುತ್ತಿದ್ದ ಮೊದಲ ಎರಡು ಪಂದ್ಯಗಳಲ್ಲಿ ನಾವು ಇದನ್ನು ನೋಡಲಿಲ್ಲ. ಸಂಜೆ ಗಾಳಿಯಲ್ಲಿ ಸ್ವಲ್ಪ ತಂಪು ಇರುತ್ತದೆ. ಆದ್ದರಿಂದ ಸ್ಪಷ್ಟವಾಗಿ ಸ್ವಿಂಗ್ಗೆ ಸಾಕಷ್ಟು ಸಾಧ್ಯತೆ ಇದೆ. ನಮಗೆ ಅದು ತಿಳಿದಿದೆ, ಆದರೆ ನಾವು ಆಡಿದ ಮೂರು ಪಂದ್ಯಗಳಲ್ಲಿ ಪಿಚ್ಗಳು ವಿಭನ್ನವಾಗಿದ್ದವು ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.