ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೊಂಚ ಬಿಡುವಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ವಿಶ್ರಾಂತಿ ಪಡೆಯುತ್ತಿದೆ. ಇದೇ ವೇಳೆ ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡಿರುವ ಟೀಮ್ ಇಂಡಿಯಾ ಬ್ಯಾಟರ್ ಸರ್ಫರಾಜ್ ಖಾನ್ ಅವರ ಸಹೋದರನ ಆರೋಗ್ಯವನ್ನು ರೋಹಿತ್ ಶರ್ಮಾ ವಿಚಾರಿಸಿದ್ದಾರೆ.
ಸರ್ಫರಾಜ್ ಖಾನ್ ಅವರ ಸಹೋದರ ಮುಂಬೈನ ಸ್ಟಾರ್ ಆಟಗಾರ ಮುಶೀರ್ ಖಾನ್ ಮತ್ತು ಅವರ ತಂದೆ ನೌಶಾದ್ ಖಾನ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಮುಶೀರ್ ಖಾನ್ ಇರಾನಿ ಕಪ್ ಟೂರ್ನಿಯನ್ನು ಸಾಧ್ಯವಾಗಿರಲಿಲ್ಲ. ಇರಾನಿ ಕಪ್ ಅನ್ನು ರಣಜಿ ಚಾಂಪಿಯನ್ ಮುಂಬೈ ತಂಡ ಗೆದ್ದಿದೆ. ಇದೀಗ ರೋಹಿತ್ ಶರ್ಮಾ ಅವರು ಸರ್ಫರಾಜ್ ಖಾನ್ ಮನೆಗೆ ಭೇಟಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಈ ವೇಳೆ ರೋಹಿತ್ ಜೊತೆಗೆ ಮುಶೀರ್ ಮತ್ತು ಅವರ ತಂದೆ ನೌಶಾದ್ ಖಾನ್ ಫೋಟೋ ತೆಗೆಸಿಕೊಂಡಿದ್ದಾರೆ. ಇದಾದ ನಂತರ ಫೋಟೋವನ್ನು ಸರ್ಫರಾಜ್ ಖಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕುವ ಮೂಲಕ ರೋಹಿತ್ ಭೇಟಿ ನೀಡಿರುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಮುಶೀರ್ ದೇಶೀಯ ಟೂರ್ನಿಗಳಲ್ಲಿ ಅಬ್ಬರಿಸುತ್ತಿದ್ದಾರೆ.
ಮುಶೀರ್ ತಮ್ಮ ತಂದೆ ನೌಶಾದ್ ಜೊತೆಗೆ ಇರಾನಿ ಕಪ್ ಪಂದ್ಯಕ್ಕಾಗಿ ಅಜಂಗಢದಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮುಜೀರ್ ಅವರಿದ್ದ ಕಾರು ಹೈವೇನಲ್ಲಿ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮುಶೀರ್ ಅವರ ಕುತ್ತಿಗೆಗೆ ಗಾಯವಾದರೆ, ಅವರ ತಂದೆಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದವು. ಬಳಿಕ ಗಾಯಗೊಂಡಿದ್ದ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಕಾರಣಕ್ಕಾಗಿ ಮುಜೀರ್ ಖಾನ್ ಅವರು ಇರಾನಿ ಕಪ್ ಪಂದ್ಯವನ್ನೂ ಆಡುವುದಕ್ಕೆ ಸಾಧ್ಯವಾಗಿರಲಿಲ್ಲ.
ನಂತರ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದರು. ಸಹೋದರನ ಅನುಪಸ್ಥಿತಿಯಲ್ಲಿ ಸರ್ಫರಾಜ್ ಖಾನ್ ಇರಾನಿ ಕಪ್ನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ದ್ವಿಶತಕ ಸಿಡಿಸಿ ಮಿಂಚಿದ್ದರು. ಈಗ ರೋಹಿತ್ ಶರ್ಮಾ ಯುವ ಆಟಗಾರರ ಮನೆ ಭೇಟಿ ನೀಡಿದ್ದು, ಅದಷ್ಟು ಬೇಗ ಮೈದಾನಕ್ಕೆ ಹಿಂತಿರುಗಲು ಧೈರ್ಯ ತುಂಬಿದ್ದಾರೆ.