ಒಂದು ತಂಡ ಒಂದು ದೇಶಕ್ಕೆ ಪ್ರವಾಸ ಬೆಳೆಸುತ್ತದೆ ಎಂದರೆ, ಆಗ ಮಾತಿನ ಚಕಮಕಿಗಳು ಕಾಮನ್. ಕೆಲವೊಂದು ತಂಡಗಳು ಆಟಗಾರರನ್ನು ಕೆದಕಿ ಕಾಟ ನೀಡುತ್ತಾರೆ. ಆದರೆ ಕೆಲವೊಬ್ಬರು ಆಟಗಾರನ ಕ್ಷಮತೆಯನ್ನು ಎತ್ತಿ ತೋರಿಸುವ ವೇದಿಕೆ ಎಂದು ಹೇಳುತ್ತಾರೆ. ಇದೇ ರೀತಿಯ ಹೇಳಿಕೆಯನ್ನು ಇಂಗ್ಲೆಂಡ್ ಮಾಜಿ ಆಟಗಾರ ಮಾಂಟಿ ಪನೇಸರ್ ನೀಡಿದ್ದಾರೆ.
ಇದೇ ಜನವರಿಯಲ್ಲಿ ಇಂಗ್ಲೆಂಡ್ ಭಾರತದ ಪ್ರವಾಸ ಆರಂಭಿಸಲಿದೆ. ಈ ವೇಳೆ ಟೀಮ್ ಇಂಡಿಯಾ ವಿರುದ್ಧ ಆಂಗ್ಲರ ತಂಡ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸರಣಿಗೆ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ ತಂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಹೆದರಿದಂತಿದೆ.

ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್ ಅವರು ರೋಹಿತ್ ಶರ್ಮಾ ಅವರನ್ನು ಸ್ಪಿನ್ ಪಿಚ್ಗಳ ಡಾನ್ ಬ್ರಾಡ್ಮನ್ ಎಂದು ಕರೆದಿದ್ದಾರೆ. ರೋಹಿತ್ ಶರ್ಮಾ ಅವರನ್ನು ಬೇಗನೆ ಔಟ್ ಮಾಡುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗದಿದ್ದರೆ, ಟೆಸ್ಟ್ ಸರಣಿಯನ್ನು ಗೆಲ್ಲಲು ಅವರಿಗೆ ಯಾವುದೇ ಅವಕಾಶವಿಲ್ಲ ಎಂದು ಪನೇಸರ್ ಹೇಳುತ್ತಾರೆ.
2012-13ರಲ್ಲಿ ಇಂಗ್ಲೆಂಡ್ ತಂಡ ಭಾರತದ ನೆಲದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಗೆಲುವಿನ ಶ್ರೇಯಸ್ಸು ಪನೇಸರ್ ಮತ್ತು ಸ್ವಾನ್ ಅವರಿಗೆ ಸಲ್ಲುತ್ತದೆ. ಈ ಸರಣಿಯಲ್ಲಿ ಸ್ವಾನ್ 20 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಪನೇಸರ್ 17 ವಿಕೆಟ್ ಪಡೆದರು. ಆದರೆ, ಸ್ವಾನ್ ಮತ್ತು ಪನೇಸರ್ ಮಟ್ಟದ ಸ್ಪಿನ್ನರ್ಗಳು ಇಂಗ್ಲೆಂಡ್ ತಂಡದ ಪರ ಆಡುತ್ತಿಲ್ಲ. ಈ ಕಾರಣಕ್ಕೆ ಪನೇಸರ್ ಇಂಗ್ಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪನೇಸರ್ ಅವರು ಆಂಗ್ಲ ಪತ್ರಿಕೆ ಹಿಂದೂಸ್ತಾನ್ಗೆ ಸಂದರ್ಶನವನ್ನು ನೀಡಿದ್ದಾರೆ. "ಭಾರತೀಯ ಬ್ಯಾಟ್ಸ್ಮನ್ಗಳು ಸ್ಪಿನ್ ಬೌಲರ್ಗಳ ವಿರುದ್ಧ ದಾಳಿ ಮಾಡಲು ಎದುರು ನೋಡುತ್ತಾ ಇರುತ್ತಾರೆ. ಭಾರತಕ್ಕೆ ರೋಹಿತ್ ಶರ್ಮಾ ಅತ್ಯಂತ ಪ್ರಮುಖರು. ರೋಹಿತ್ ಶರ್ಮಾ ಸ್ಪಿನ್ ಪಿಚ್ಗಳಲ್ಲಿ ಡಾನ್ ಬ್ರಾಡ್ಮನ್ಗಿಂತ ಕಡಿಮೆಯಿಲ್ಲ. ರೋಹಿತ್ ಶರ್ಮಾ ಅವರ ದಾಖಲೆ ಅದ್ಭುತವಾಗಿದೆ.

ರೋಹಿತ್ ಶರ್ಮಾ ಅವರನ್ನು ಬೇಗನೆ ಔಟ್ ಮಾಡುವುದೊಂದೇ ಭಾರತವನ್ನು ತಡೆಯಲು ಇಂಗ್ಲೆಂಡ್ಗೆ ಇರುವ ಏಕೈಕ ಮಾರ್ಗವಾಗಿದೆ ಎಂದು ಪನೇಸರ್ ತಿಳಿಸಿದ್ದಾರೆ. ಇಂಗ್ಲೆಂಡ್ ತಂಡವು ಭಾರತದಲ್ಲಿ ಸರಣಿ ಗೆಲ್ಲುವ ಕನಸನ್ನು ನನಸಾಗಿಸಲು ಬಯಸಿದರೆ, ಪ್ರತಿ ಟೆಸ್ಟ್ನಲ್ಲೂ ರೋಹಿತ್ ಶರ್ಮಾ ಅವರನ್ನು ಬೇಗನೆ ಔಟ್ ಮಾಡಬೇಕಾಗುತ್ತದೆ. ರೋಹಿತ್ ಶರ್ಮಾ ಬೇಗನೆ ಔಟಾದರೆ ಟೀಂ ಇಂಡಿಯಾ ಪ್ಲಾನ್ ಬಿ ಅಳವಡಿಸಿಕೊಳ್ಳಬೇಕಾಗುತ್ತದೆ. ಭಾರತದ ಯುವ ಬ್ಯಾಟ್ಸ್ಮನ್ಗಳು ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಇದು ಇಂಗ್ಲೆಂಡ್ಗೆ ಉತ್ತಮ ಅವಕಾಶ ಎಂದು ಸಾಬೀತುಪಡಿಸಬಹುದು ಎಂದಿದ್ದಾರೆ.
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡಕ್ಕೂ ಈ ಸರಣಿಯು ಬಹಳ ಮುಖ್ಯವಾಗಿದೆ. ಒಂದು ವೇಳೆ ಈ ಸರಣಿಯನ್ನು ಗೆಲ್ಲುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗದಿದ್ದರೆ, ಫೈನಲ್ಗೆ ತಲುಪುವ ಸಾಧ್ಯತೆಗಳು ಕ್ಷೀಣವಾಗಿರುತ್ತವೆ. ಭಾರತದ ಪರಿಸ್ಥಿತಿಯೂ ಇದೇ ಆಗಿದೆ. ಫೈನಲ್ನ ರೇಸ್ನಲ್ಲಿ ಉಳಿಯಲು, ಭಾರತವು ಯಾವುದೇ ಬೆಲೆ ತೆತ್ತಾದರೂ ಈ ಸರಣಿಯನ್ನು ಗೆಲ್ಲಲೇಬೇಕು.