
ನವದೆಹಲಿ, ಆಗಸ್ಟ್ 21: ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರಗಳಾದ ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳ ವಿಜೇತರ ಹೆಸರುಗಳು ಶುಕ್ರವಾರ (ಆಗಸ್ಟ್ 21) ಪ್ರಕಟಗೊಂಡಿವೆ. ಭಾರತದ ಆರಂಭಿಕ ಬ್ಯಾಟ್ಸ್ಮನ್, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ರಾಜೀವ್ ಗಾಂಧಿ ಖೇಲ್ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ.
2020ರ ವರ್ಷದ ಪ್ರತಿಷ್ಠಿತ ರಾಜೀವ್ ಗಾಧಿ ಖೇಲ್ ರತ್ನ ಪ್ರಶಸ್ತಿಗಾಗಿ ರೋಹಿತ್ ಶರ್ಮಾ ಜೊತೆಗೆ ರಸ್ಲರ್ ವಿನೇಶ್ ಫೋಗಟ್, ಟೇಬಲ್ ಟೆನಿಸ್ ಸ್ಟಾರ್ ಮಣಿಕಾ ಬಾತ್ರಾ ಮತ್ತು 2016ರ ಪ್ಯಾರಾಲಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು, ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಹೆಸರಿಸಲ್ಪಟ್ಟಿದ್ದಾರೆ.
2019ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಶರ್ಮಾ ಹೆಸರನ್ನು ಖೇಲ್ ರತ್ನಕ್ಕೆ ಶಿಫಾರಸು ಮಾಡಲಾಗಿತ್ತು. ಕಳೆದ ವರ್ಷ ಏಕದಿನದಲ್ಲಿ 1,490 ರನ್, 7 ಶತಕಗಳನ್ನು ಬಾರಿಸಿದ್ದ ರೋಹಿತ್, ಅತ್ಯಧಿಕ ರನ್ ಗಳಿಸಿದ ವರ್ಷದ ಕ್ರಿಕೆಟಿಗನಾಗಿ ಗಮನ ಸೆಳೆದಿದ್ದರು.
ಈ ಬಾರಿ ರಾಜೀವ್ ಗಾಂಧಿ ಖೇಲ್ ರತ್ನ ಪಡೆಯುವ ಮೂಲಕ ರೋಹಿತ್ ಈ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ, ರನ್ ಮಷಿನ್ ವಿರಾಟ್ ಕೊಹ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದರು.