ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ, ಭಾರತ ಕ್ರಿಕೆಟ್ ತಂಡವು ಇದೀಗ ತವರಿಗೆ ಮರಳುತ್ತಿರುವುದನ್ನು ಗುರುತಿಸಲಾಗಿದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಅಜೇಯರಾಗಿ ಉಳಿದರು ಮತ್ತು ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸಿ ತಮ್ಮ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿದರು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಎಲ್ಲಾ ಭಾರತೀಯ ಕ್ರಿಕೆಟ್ ತಾರೆಯರು ಏರ್ ಇಂಡಿಯಾ ವಿಮಾನವನ್ನು ಹತ್ತುವುದನ್ನು ಸೆರೆಹಿಡಿಯಲಾಗಿದೆ. ಇದು ಅವರನ್ನು ಭಾರತಕ್ಕೆ ಮರಳಿ ತರುತ್ತಿದೆ.
ನ್ಯೂ ಜೆರ್ಸಿಯಿಂದ ಬರಬೇಕಿದ್ದ ಚಾರ್ಟರ್ ಫ್ಲೈಟ್ ಬಾರ್ಬಡೋಸ್ ತಲುಪಲು ಅಸಾಧ್ಯವಾಗಿದ್ದರಿಂದ, ಬಾರ್ಬಡೋಸ್ನಿಂದ ಭಾರತ ತಂಡವು ತವರಿಗೆ ಮರಳುವುದು ವಿಳಂಬವಾಯಿತು ಎಂಬುದು ಗಮನಿಸಬೇಕಾದ ಸಂಗತಿ.
ಅಪಾಯಕಾರಿ ಬೆರಿಲ್ ಚಂಡಮಾರುತವು ಬಾರ್ಬಡೋಸ್ನಲ್ಲಿ ಬಂದಿಳಿಯುವ ಮತ್ತು ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದ ನಂತರ, ವಿಮಾನ ನಿಲ್ದಾಣವನ್ನು ಬಂದ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಇದರಿಂದಾಗಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ, ಕುಟುಂಬಗಳು ಸೇರಿದಂತೆ ಹಲವರು ಬಾರ್ಬಡೋಸ್ನಲ್ಲೇ ಸಿಲುಕಿಕೊಂಡಿದ್ದರು. ಅಲ್ಲದೆ, ಬೆರಿಲ್ ಚಂಡಮಾರುತ ಬಾರ್ಬಡೋಸ್ ಕಡೆಗೆ ಅಪ್ಪಳಿಸಿ ಬರುತ್ತಿರುವಾ ಕಾರಣ, ಆತಂಕ ಹೆಚ್ಚಾಗಿತ್ತು.
ಇತ್ತೀಚೆಗೆ ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಬುಧವಾರ ಸಂಜೆ ಹೊತ್ತಿಗೆ ಆಟಗಾರರು ನವದೆಹಲಿಗೆ ಹಾರಲಿದ್ದಾರೆ ಎಂದು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಥ್ಯಾಂಕ್ ಗಾಡ್ ಟೀಮ್ ಇಂಡಿಯಾ ಬುಧವಾರ ಸಂಜೆ ಬಾರ್ಬಡೋಸ್ನಿಂದ ನವದೆಹಲಿಗೆ ಹಿಂತಿರುಗುತ್ತಿದೆ. ನಾಳೆ ಬೆಳಿಗ್ಗೆ ತಲುಪಲಿದೆ. ಭಾರಿ ಚಂಡಮಾರುತದಿಂದಾಗಿ ಅವರು ಮೂರು ದಿನಗಳ ಕಾಲ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡರು. ಬಿಸಿಸಿಐ ಆಟಗಾರರು ಸುರಕ್ಷಿತವಾಗಿ ತವರಿಗೆ ಮರಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೇ ಇಡೀ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ," ಎಂದು ರಾಜೀವ್ ಶುಕ್ಲಾ ಟ್ವೀಟ್ ಮಾಡಿದ್ದಾರೆ.
AIC24WC, Air India Champions 24 World Cup ಎಂಬ ಹೆಸರಿನ ಏರ್ ಇಂಡಿಯಾ ವಿಶೇಷ ಚಾರ್ಟರ್ ವಿಮಾನವು, ಬೆರಿಲ್ ಚಂಡಮಾರುತದಿಂದಾಗಿ ಕಳೆದ ಮೂರು ದಿನಗಳಿಂದ ಬಾರ್ಬಡೋಸ್ನಲ್ಲಿ ಸಿಲುಕಿರುವ ಭಾರತೀಯ ತಂಡ, ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬಗಳು, ಮಂಡಳಿಯ ಕೆಲವು ಅಧಿಕಾರಿಗಳು ಮತ್ತು ಭಾರತೀಯ ಕ್ರೀಡಾ ಪತ್ರಕರ್ತರನ್ನು ತವರಿಗೆ ಕರೆತರಲು ಸಿದ್ಧವಾಗಿದೆ.
ಹೆಚ್ಚಿನ ವಿವರಗಳು ಮತ್ತು ಟೀಮ್ ಇಂಡಿಯಾ ಸ್ವದೇಶಕ್ಕೆ ಪ್ರಯಾಣಿಸುವ ವಿಮಾನದ ಲೈವ್ ಟ್ರ್ಯಾಕಿಂಗ್ ಅನ್ನು flightradar24.com ನಲ್ಲಿ ವೀಕ್ಷಿಸಬಹುದು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 176 ರನ್ ಕಲೆಹಾಕಲು ವಿರಾಟ್ ಕೊಹ್ಲಿ ಅವರ 59 ಎಸೆತಗಳಲ್ಲಿ 76 ರನ್ಗಳು ನಿರ್ಣಾಯಕವಾಗಿದ್ದವು.
ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಂತಿಮ ಓವರ್ನಲ್ಲಿ ಭಾರತಕ್ಕೆ 16 ರನ್ಗಳನ್ನು ಯಶಸ್ವಿಯಾಗಿ ರಕ್ಷಿಸಿದರು.
ಇದರ ಪರಿಣಾಮವಾಗಿ, ರೋಚಕ ಫೈನಲ್ ಹಣಾಹಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಗೆಲುವು ಸಾಧಿಸಿತು ಮತ್ತು 11 ವರ್ಷಗಳ ಸುದೀರ್ಘ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಿತು.