ಭಾರತ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ನ್ಯೂಜಿಲೆಂಡ್ ಎದುರಿಸಲಿದೆ. ಈ ಟೂರ್ನಿಯ ಬಳಿಕ ಭಾರತ ತಂಡದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯಲಿವೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಭಾರತ ಸೋತ ನಂತರ ರೋಹಿತ್ ಶರ್ಮಾ ಭವಿಷ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈಗಾಗಲೇ 38 ವರ್ಷ ದ ರೋಹಿತ್ ಶರ್ಮಾ 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಚುಟುಕು ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲದೇ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಕೂಡ ಟಿ20 ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ಇದೀಗ ಈ ಮೂವರು ಕೇವಲ ಎರಡು ಸ್ವರೂಪಗಳತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

ಟೀಮ್ ಇಂಡಿಯಾ ಜೂನ್ ತಿಂಗಳಲ್ಲಿ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಜೊತೆಗೆ ಟೀಮ್ ಇಂಡಿಯಾಕ್ಕೆ ಮುಂದಿನ ಪ್ರಮುಖ ಏಕದಿನ ಟೂರ್ನಿ 2027ರ ಏಕದಿನ ವಿಶ್ವಕಪ್ ಆಗಿದೆ. ಈಗ, ಚಾಂಪಿಯನ್ಸ್ ಟ್ರೋಫಿ 2025 ಬಳಿಕ ಮುಂದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ನಡುವೆ ಸಾಕಷ್ಟು ಸಮಯ ಇರುವುದರಿಂದ, ಭಾರತ ತಂಡದಲ್ಲಿ ಪರಿವರ್ತನೆಯ ಗಾಳಿ ಬೀಸಲಿದೆ.
ವರದಿಗಳ ಪ್ರಕಾರ, ಗೌತಮ್ ಗಂಭೀರ್ ಹೆಡ್ಕೋಚ್ ಆದ ನಂತರ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಭಾರತೀಯ ಕ್ರಿಕೆಟ್ನ ಭವಿಷ್ಯದ ನಿಟ್ಟಿನಲ್ಲಿ ಕೆಲ ದೃಢ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೊಸ ಪ್ರಯೋಗ ನಡೆಸುವ ಸಾಧ್ಯತೆಯಿದೆ.
ಇದಕ್ಕೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಪ್ರಮುಖ ವೇದಿಕೆಯಾಗಿದ್ದು, ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತರೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ವೃತ್ತಿಜೀವನಕ್ಕೂ ತೆರೆ ಎಳೆಯಬಹುದು ವರದಿಗಳಾಗಿವೆ. ಭಾರತ ತಂಡ ಚಾಂಪಿಯನ್ ಆದರೆ, ರೋಹಿತ್ ಶರ್ಮಾ ಅವರ ನಿರ್ಧಾರದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಅವರು ನಾಯಕತ್ವದಿಂದ ಕೆಳಗಿಳಿದು ಆಟಗಾರನಾಗಿ ಮುಂದುವರೆಯಬಹುದು. ಈ ಎರಡೂ ಸಂದರ್ಭಗಳಲ್ಲಿ ನಿರ್ಧಾರವು ರೋಹಿತ್ ಅವರ ಮೇಲಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನಾಯಕತ್ವ ತ್ಯಜಿಸಿದರೆ, ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದ್ದು, ಇದಕ್ಕೆ ಟೀಮ್ ಇಂಡಿಯಾದ ಇಬ್ಬರು ಆಟಗಾರರ ಹೆಸರು ಕೇಳಿಬರುತ್ತಿದೆ. ಹಾಲಿ ಉಪ ನಾಯಕ ಶುಭಮನ್ ಗಿಲ್ ಅಥವಾ ಹಾರ್ದಿಕ್ ಪಾಂಡ್ಯಾ ಭಾರತ ಏಕದಿನ ತಂಡದ ನಾಯಕನಾಗುವ ನಿರೀಕ್ಷೆಯಿದೆ.