ಭಾರತದ ಹಾಲಿ ಟೆಸ್ಟ್ ನಾಯಕ ರೋಹಿತ್ ಶರ್ಮಾ ಐದನೇ ಟೆಸ್ಟ್ ಪಂದ್ಯದಲ್ಲಿ ತಂಡದಿಂದ ಹೊರ ನಡೆದಿದ್ದಾರೆ. ಕಳಪೆ ಫಾರ್ಮ್ನಿಂದಾಗಿ ರೋಹಿತ್ ಶರ್ಮಾ ಹೊರ ನಡೆದಿದ್ದಾರೆ. ಇವರ ಬದಲಿಗೆ ಬಾರ್ಡರ್ ಗವಾಸ್ಕರ್ ಸರಣಿಯ ಐದನೇ ಪಂದ್ಯದಲ್ಲಿ ತಂಡವನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸುತ್ತಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈ ಗೊಂಡಿದೆ. ತಂಡದಲ್ಲಿ ಪ್ರಸಿದ್ಧ ಕೃಷ್ಣಾ ಅವರಿಗೆ ಅವಕಾಶ ನೀಡಲಾಗಿದ್ದು, ಶುಭಮನ್ ಗಿಲ್ ಮತ್ತೆ ಕಂ ಬ್ಯಾಕ್ ಮಾಡಿದ್ದಾರೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರು ಆಡಿರುವ 3 ಪಂದ್ಯಗಳಲ್ಲಿ 31 ರನ್ ಸಿಡಿಸಿದ್ದು ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇತ್ತು. ರೋಹಿತ್ ಶರ್ಮಾ ಐದನೇ ಟೆಸ್ಟ್ನಿಂದ ದೂರ ಉಳಿಯಲಿದ್ದಾರೆ ಎಂಬ ಸಂಗತಿ ಅಭಿಮಾನಿಗಳಿಗೆ ಗುರುವಾರವೇ ಸಿಕ್ಕಿತ್ತು. ಪರಂಪರೆಯಂತೆ ಟೆಸ್ಟ್ನ ಮುನ್ನ ದಿನದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಬರುತ್ತಾರೆ. ಆದರೆ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್ ಬಂದಿದ್ದರಿಂದ ಪ್ರಶ್ನೆಗಳು ಎದ್ದವು.

ಟೀಮ್ ಇಂಡಿಯಾವನ್ನು ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಎರಡನೇ ಬಾರಿಗೆ ಮುನ್ನಡೆಸುವ ಅವಕಾಶವನ್ನು ಜಸ್ಪ್ರಿತ್ ಬುಮ್ರಾ ಪಡೆದಿದ್ದಾರೆ. ಇವರು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಪರ್ತ್ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಸರಣಿಯಲ್ಲಿ ಟೀಮ್ ಇಂಡಿಯಾ ಆ ಒಂದೇ ಒಂದು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ರೋಹಿತ್ ಅನುಪಸ್ಥಿತಿಯಲ್ಲಿ ಬುಮ್ರಾ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ.
ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ಕ್ಷಮತೆಯ ಬಗ್ಗೆ ಯಾರಿಗೂ ಪ್ರಶ್ನೆ ಇಲ್ಲವೇ ಇಲ್ಲ. ಆದರೆ ಈ ಸರಣಿಯಲ್ಲಿ ಅವರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ತಂಡದಿಂದ ದೂರ ಉಳಿಯುವಂತೆ ಮಾಡಿದೆ. 2024ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ತಂಡಕ್ಕೆ ಚಾಂಪಿಯನ್ ಮುಕುಟ ತೊಡಿಸಿರುವ ರೋಹಿತ್ ಶರ್ಮಾ, ಬೆಸ್ಟ್ ಕ್ಯಾಪ್ಟನ್. ಟಿ20 ವಿಶ್ವಕಪ್ ಬಳಿಕ ರೋಹಿತ್ ಚುಟುಕು ಫಾರ್ಮೆಟ್ಗೆ ಗುಡ್ ಬೈ ಹೇಳಿ, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಅವರು ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ 2022ರಲ್ಲಿ ರೋಹಿತ್ ಶರ್ಮಾ ಈ ಸ್ಥಾನ ತುಂಬಿದರು. ಇವರು ಟೆಸ್ಟ್ ಪಂದ್ಯದ ನಾಯಕತ್ವ ಪಡೆದಾಗಿನಿಂದಲೂ ಇಂದಿನ ವರೆಗೆ ಬರೀ ನಾಲ್ಕು ಪಂದ್ಯಗಳನ್ನು ಮಾತ್ರ ರೋಹಿತ್ ಮಿಸ್ ಮಾಡಿಕೊಂಡಿದ್ದಾರೆ. ಈ ಪಂದ್ಯಗಳಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಕೆಎಲ್ ರಾಹುಲ್ ತಲಾ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
2022ರಲ್ಲಿ ರೋಹಿತ್ ನಾಯಕರಾಗಿ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಮಿಸ್ ಮಾಡಿಕೊಂಡರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳಿಂದ ಸೋತಿತ್ತು. ಇದೇ ವರ್ಷ ಟೀಮ್ ಇಂಡಿಯಾ ಬಾಂಗ್ಲಾದೇಶದ ಪ್ರವಾಸವನ್ನು ಮಾಡಿತ್ತು. ಈ ವೇಳೆಯೂ ರೋಹಿತ್ ತಂಡದಿಂದ ಹೊರಗಿದ್ದರು. ಆಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು. ಈ ಸರಣಿಯಲ್ಲಿ ಒಂದು ಗೆಲುವು, ಒಂದು ಸೋಲು ಕಾಣಬೇಕಾಯಿತು. ಇದಾದ ಬಳಿಕ ಈ ಸರಣಿಯ ಮೊದಲ ಪಂದ್ಯದಲ್ಲಿ ಕೌಟುಂಬಿಕ ಕಾರಣಗಳಿಂದ ದೂರ ಉಳಿದಿದ್ದರು. ಈ ಪಂದ್ಯದಲ್ಲಿ ಬುಮ್ರಾ ತಂಡವನ್ನು ಮುನ್ನಡೆಸಿದ್ದು, ಭಾರತ ಪಂದ್ಯವನ್ನು 295 ರನ್ಗಳಿಂದ ಗೆದ್ದುಕೊಂಡಿತ್ತು.