ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಆರಂಭವಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮಧ್ಯದಲ್ಲಿ ಭಾರತ ತಂಡದಿಂದ ರೋಹಿತ್ ಅವರನ್ನು ಕೈಬಿಡಲಾಯಿತು. ಇದೀಗ ಸಿಡ್ನಿ ಟೆಸ್ಟ್ ನಂತರ ಅವರ ನಿವೃತ್ತಿ ಬಗ್ಗೆಯೂ ಊಹಾಪೋಹಗಳಿವೆ. ವರದಿಗಳ ಪ್ರಕಾರ, ಸಿಡ್ನಿ ಟೆಸ್ಟ್ ಬಳಿಕ ಆಯ್ಕೆದಾರರು ರೋಹಿತ್ ಶರ್ಮಾ ಅವರಿಗೆ ತಮ್ಮ ಪ್ಲಾನ್ನಲ್ಲಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಡ್ನಿ ಟೆಸ್ಟ್ನಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ. ಇದೇ ವೇಳೆ ರೋಹಿತ್ ಸ್ಥಾನಕ್ಕೆ ಶುಭಮನ್ ಗಿಲ್ ಮರಳಿದ್ದಾರೆ.
ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾ ನೂತನ ಹೆಡ್ಕೋಚ್ ಆಗುತ್ತಿದ್ದಂತೆ ರೋಹಿತ್ ಅವರ ಕೆಟ್ಟ ಹಂತ ಪ್ರಾರಂಭವಾಗಿದೆ ಎಂಬುದು ಅಭಿಮಾನಿಗಳ ಚರ್ಚೆಯಾಗಿದೆ. ಮೊದಲು ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಸೋತಿತ್ತು. ನಂತರ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಸೋಲು ರೋಹಿತ್ ಶರ್ಮಾ ವೃತ್ತಿಜೀವನದ ಮೇಲೆ ಪ್ರಭಾವ ಬೀರಿತ್ತು. ಇದರ ಮಧ್ಯೆ ರೋಹಿತ್ ಶರ್ಮಾ ಫಾರ್ಮ್ ಕೂಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿತ್ತು.

ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಪ್ರದರ್ಶನ ನಿರಾಶಾದಾಯಕವಾಗಿತ್ತು. ಅವರು ಆಡಿರುವ 6 ಇನ್ನಿಂಗ್ಸ್ಗಳಲ್ಲಿ ಎರಡಂಕಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. ಸರಣಿಯಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಮೊದಲು ಬ್ಯಾಟ್ ಮಾಡಿದ್ದು, ನಂತರ ಆರಂಭಿಕರಾಗಿಯೂ ಆಡಿದ್ದರು. ಆದರೆ, ರನ್ ಗಳಿಸುವಲ್ಲಿ ಹಿಂದೆ ಉಳಿದರು. ಇದೀಗ ವಿಶ್ರಾಂತಿ ನೀಡುವ ನೆಪದಲ್ಲಿ ಅವರನ್ನು ಸಿಡ್ನಿ ಟೆಸ್ಟ್ನಲ್ಲಿ ಆಡುವ ಹನ್ನೊಂದರ ಬಗಳದಿಂದ ಕೈಬಿಡಲಾಗಿದೆ. ಇದರೊಂದಿಗೆ ರೋಹಿತ್ ಶರ್ಮಾ ಸರಣಿಯ ಮಧ್ಯದಲ್ಲಿ ಕೈಬಿಟ್ಟ ಮೊದಲ ನಾಯಕ ಎನಿಸಿಕೊಂಡಿದ್ದಾರೆ.
ವರದಿ ಪ್ರಕಾರ, ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿಸಿಸಿಐ ಆಯ್ಕೆಗಾರರ ಯೋಜನೆಯಲ್ಲಿಲ್ಲ. ಸಿಡ್ನಿ ಟೆಸ್ಟ್ಗೂ ಮುನ್ನವೇ ರೋಹಿತ್ಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆಸ್ಟ್ರೇಲಿಯಾ ಪ್ರವಾಸದ ನಂತರ, ಆಯ್ಕೆದಾರರು ವಿರಾಟ್ ಕೊಹ್ಲಿಯೊಂದಿಗೆ ಮುಂದಿನ ಕಾರ್ಯತಂತ್ರವನ್ನು ಚರ್ಚಿಸುತ್ತಾರೆ ಎಂದು ತಿಳಿದುಬಂದಿದೆ. ಏಕೆಂದರೆ ಭಾರತ ತಂಡವು ದೊಡ್ಡ ಬದಲಾವಣೆಯನ್ನು ಕಾಣಲು ಸಿದ್ಧವಾಗಿದೆ. ತಂಡದ ಅನುಭವಿ ಆಟಗಾರ ರವೀಂದ್ರ ಜಡೇಜಾ ಅವರ ವೃತ್ತಿಜೀವನದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಸಿಡ್ನಿ ಟೆಸ್ಟ್ ನಂತರ ರೋಹಿತ್ ನಿವೃತ್ತಿ ಘೋಷಿಸಲಿದ್ದಾರೆ ಎಂದು ಟೀಮ್ ಇಂಡಿಯಾ ದಿಗ್ಗಜ ಸುನಿಲ್ ಗವಾಸ್ಕರ್ ಮತ್ತು ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಖಚಿತಪಡಿಸಿದ್ದಾರೆ. ಗವಾಸ್ಕರ್ ಪ್ರಕಾರ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯದಿದ್ದರೆ, ಮೆಲ್ಬೋರ್ನ್ ರೋಹಿತ್ ಅವರ ಕೊನೆಯ ಟೆಸ್ಟ್ ಆಗಿರುತ್ತದೆ. ಮತ್ತೊಂದೆಡೆ, ಎಲ್ಲದಕ್ಕೂ ಒಂದು ಸಮಯವಿದೆ. ಈಗ ಮುಂದುವರಿಯುವ ಸಮಯ ಬಂದಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.