
ನವದೆಹಲಿ: ಈ ಮೊದಲು ಕ್ರೆಡ್ ಜಾಹೀರಾತಿನಲ್ಲಿ ಕನ್ನಡಿಗ, ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕಾಣಿಸಿಕೊಂಡಿದ್ದರು. 'ಇಂದಿರಾನಗರದ ಗೂಂಡ'ನಾಗಿ ದ್ರಾವಿಡ್ ಸಿಡುಕನ್ನು ತೋರಿಸಿಕೊಂಡಿದ್ದ ಈ ಜಾಹೀರಾತು ತಮಾಷೆಯಾಗಿತ್ತು. ಈಗ ಇದೇ ಜಾಹೀರಾತಿನಲ್ಲಿ ಮತ್ತೊಬ್ಬ ಕನ್ನಡಿಗ, ಟೀಮ್ ಇಂಡಿಯಾದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಕಾಣಿಸಿಕೊಂಡಿದ್ದಾರೆ.
ಕ್ರೆಡ್ ಆ್ಯಪ್ನ ಹೊಸ ಜಾಹೀರಾತಿನಲ್ಲಿ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್ ಮತ್ತು ಮಣೀಂದರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಗಾಯಕರಾಗಿ ಮೂವರೂ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ಚೆನ್ನಾಗಿದೆ.
ವೆಂಕಟೇಶ್ ಪ್ರಸಾದ್ ಕಾಣಿಸಿಕೊಂಡಿರುವ ಈ ಜಾಹೀರಾತಿನ ವಿಡಿಯೋವನ್ನು ಭಾರತದ ಪ್ರಮುಖ ಬ್ಯಾಟ್ಸ್ಮನ್, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ಟ್ವಿಟರ್ನಲ್ಲಿ ತಾನು ಸಣ್ಣ ವಯಸಿನವನಾಗಿದ್ದಾಗ ಪ್ರಸಾದ್ ಅವರಿಂದ ಕೋಚಿಂಗ್ ಪಡೆದ ದಿನಗಳನ್ನು ಶರ್ಮಾ ಸ್ಮರಿಸಿಕೊಂಡಿದ್ದಾರೆ.
ಟ್ವೀಟ್ನಲ್ಲಿ ರೋಹಿತ್, 'ಕೋಚ್ ಆಗಿ ಮೈದಾನದಲ್ಲಿ ನಿಮ್ಮ ಮಾತುಗಳನ್ನು ಕೇಳುವಾಗಿನಿಂದ ಹಿಡಿದು, ಸ್ಟೀಡಿಯಂಗೆ ನಿಮ್ಮ ಹಾಡು ಕೇಳುತ್ತ ಸಾಗುವಲ್ಲಿಯವರೆಗೆ. ವೆಂಕಿಯಣ್ಣ, ಇದೊಂದು ಪಯಣ' ಎಂದು ಬರೆದುಕೊಂಡಿದ್ದಾರೆ. ಮೇ 1ರಂದು ಶರ್ಮಾ ಈ ಟ್ವೀಟ್ ಮಾಡಿದ್ದಾರೆ.