ಸಿಡ್ನಿಯಲ್ಲಿ ಐದನೇ ಟೆಸ್ಟ್ಗೆ ಸಿದ್ಧತೆ ಜೋರಾಗಿದೆ. ಶುಕ್ರವಾರದಿಂದ ನಡೆಯಲಿರುವ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯ ಆರಂಭಕ್ಕೂ ಮುನ್ನವೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಹಲವು. ಅದರಲ್ಲಿ ಮುಖ್ಯ ಕಾರಣ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್. ಸಿಡ್ನಿ ಪಿಚ್ ನೋಡಿ ತಂಡವನ್ನು ಘೋಷಿಸಲಾಗುವುದು ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಸದ್ಯ ಪ್ರವಾಸಿ ಭಾರತ ತಂಡ 1-2 ರಿಂದ ಹಿನ್ನಡೆ ಅನುಭವಿಸುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಕಳಪೆ ಬ್ಯಾಟಿಂಗ್ ಬಯಲಾಗಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಈಗ ಈ ಪ್ರಶ್ನೆಗಳ ಕೂಗು ದೊಡ್ಡದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿ ನಾಯಕನನ್ನೇ ಸಿಡ್ನಿ ಟೆಸ್ಟ್ನಿಂದ ಹೊರಗಿಡುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಈ ಬಗ್ಗೆ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಪಿಚ್ ನೋಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಗೌತಮ್ ಗಂಭೀರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಾವು ಪಿಚ್ ಮರ್ಮ ನೋಡಿ ಆಟಗಾರರಿಗೆ ಮಣೆ ಹಾಕುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ತಂಡದಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸಲಿದ್ದು, ಇದರ ವೇಗ ಯಾವ ಯಾವ ಆಟಗಾರರ ಮನಸ್ಸಿಗೆ ಪೆಟ್ಟು ನೀಡುತ್ತದೋ ತಿಳಿಯದು. ರೋಹಿತ್ ಶರ್ಮಾ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದು ಇವರನ್ನು ಕೈ ಬಿಟ್ಟು ಬೆಂಚ್ ಮೇಲೆ ಕೂರಿಸಿದರೂ ಅಚ್ಚರಿಯಿಲ್ಲ. ಅದೇ ಕಾರಣಕ್ಕೆ ಪಂದ್ಯದ ಮುನ್ನ ದಿನ ನಾಯಕ ಬಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಗೌತಮ್ ಗಂಭೀರ್ ಬಂದಿದ್ದಕ್ಕೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ.
ರೋಹಿತ್ ಶರ್ಮಾ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸದೇ ಇದ್ದಲ್ಲಿ ಏನು ಕಥೆ ಎಂಬ ಪ್ರಶ್ನೆಗಳು ಮೂಡಿವೆ. ಇನ್ನು ರೋಹಿತ್ ಶರ್ಮಾ ಸೇರಿದಂತೆ ಹಲವು ಹಿರಿಯ ಆಟಗಾರರು, ನಾವು ಡ್ರೆಸ್ಸಿಂಗ್ ರೂಮ್ನಲ್ಲಿ ಕೂಳಿತು ಕೊಳ್ಳುವುದಕ್ಕಿಂತ ಮನೆಯಲ್ಲಿ ಕೂಳಿತುಕೊಳ್ಳುತ್ತೇವೆ ಎಂಬ ಮನಸ್ಥಿತಿ ಹೊಂದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟರೆ, ಎರಡನೇ ಯೋಚನೆ ಮಾಡದೇ ರೋಹಿತ್ ನಿವೃತ್ತಿ ನಿರ್ಧಾರ ಕೈ ಗೊಳ್ಳಬಹುದು.

ಬ್ರಿಸ್ಬೇನ್ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶವನ್ನು ನೀಡದಕ್ಕಾಗಿ, ಅಶ್ವಿನ್ ಬೇಸರಗೊಂಡಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದಿರುವುದಾಗಿ ಧಿಡೀರ್ ಘೋಷಣೆ ಮಾಡಿದರು. ಅಶ್ವಿನ್ ಹಾದಿಯನ್ನೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಡಿಯುತ್ತಾರಾ ಎಂಬ ಭಯ ಅಭಿಮಾನಿಗಳಿಗೆ ಶುರುವಾಗಿದೆ.