ಭಾರತ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸದ್ಯ ರೋಹಿತ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನತ್ತ ಚಿತ್ತ ನೆಟ್ಟಿದ್ದಾರೆ. ಈ ವೇಳೆ ರೋಹಿತ್ ಕಾರ್ಯಕ್ರಮವೊಂದರಲ್ಲಿ 2023ರಲ್ಲಿ ಟೀಮ್ ಇಂಡಿಯಾ ಫೈನಲ್ನಲ್ಲಿ ಸೋತ ಬಳಿಕ ಅವರ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ಬಗ್ಗೆ ಹಲವು ವೇದಿಕೆಗಳನ್ನು ಮಾತನಾಡಿದ್ದಾರೆ. ಆದರೆ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ರೋಹಿತ್ ಮನದಾಳದಲ್ಲಿ ಅಡಗಿಟ್ಟುಕೊಂಡಿದ್ದ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಆ ಒಂದು ಘಟನೆ ಅವರನ್ನು ಬಹುವಾಗಿ ಕಾಡಿತ್ತು ಎಂದು ರೋಹಿತ್ ತಿಳಿಸಿದ್ದಾರೆ. ಅಲ್ಲದೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು, ಬೇಸರ ತರಿಸಿದೆ ಎಂದು ಸಹ ತಿಳಿಸಿದ್ದಾರೆ. ಈ ಸೋಲಿನ ಬಳಿಕ ಕ್ರಿಕೆಟ್ನಿಂದ ದೂರ ಸರಿಯಲು ನಿರ್ಧರಿಸಿದ್ದಾಗಿ ಬಹಿರಂಗ ಪಡಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧದ ಸೋಲು ತಂಡದಲ್ಲಿ ಮೌನ ಆವರಿಸುವಂತೆ ಮಾಡಿತು. ಎಲ್ಲರೂ ಈ ಸೋಲಿನಿಂದ ದುಃಖಿತರಾಗಿದ್ದರು. ಈ ಸೋಲು ನಮಗೆ ನಂಬಲು ಕಷ್ಟವಾಗಿತ್ತು. ವೈಯಕ್ತಿಕವಾಗಿ ಇದು ನನಗೆ ಕಷ್ಟದ ಸಮಯವಾಗಿತ್ತು. ಈ ಒಂದು ಟ್ರೋಫಿಯನ್ನು ಪಡೆಯಲು ನಾನು ಎಲ್ಲವನ್ನೂ ಪಣಕ್ಕಿಟ್ಟಿದ್ದೆ. ಇದಕ್ಕಾಗಿ ನಾನು 2 ಅಥವಾ 3 ತಿಂಗಳಿನಿಂದ ತಯಾರಿ ನಡೆಸಿರಲಿಲ್ಲ. ಬಿಸಿಸಿಐ ಯಾವಾಗ ನನಗೆ ಟೀಮ್ ಇಂಡಿಯಾ ಜವಾಬ್ದಾರಿಯನ್ನು ನೀಡಿತೋ ಆಗಿನಿಂದಲೂ ನಾನು ವಿಶ್ವಕಪ್ಗೆ ತಯಾರಿ ನಡೆಸಿದ್ದೇ ಎಂದು ರೋಹಿತ್ ಬಹಿರಂಗ ಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸೋಲು ನನ್ನನ್ನು ಕುಗ್ಗಿಸಿತ್ತು. ಸೋಲು ನನ್ನನ್ನು ಹತಾಶನನ್ನಾಗಿ ಮಾಡಿತು. ನನ್ನ ದೇಹ, ನನ್ನ ಮನಸ್ಸಿನಲ್ಲಿ ಏನು ಉಳಿದಿರಲಿಲ್ಲ. ಆಟ ನನ್ನ ಶಕ್ತಿ ಪಡೆದು ಬಿಟ್ಟಿದೆ ಎಂಬ ಭಾಸವಾಯಿತು. ಈ ವಿಶ್ವಕಪ್ಗಾಗಿ ನಾನು ಎಲ್ಲವನ್ನೂ ನೀಡಿದ್ದೆ. ಇನ್ನು ಮುಂದೆ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂದು ಪ್ರಾಮಾಣಿಕವಾಗಿ ಭಾವಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಸೋಲಿನಿಂದ ಹೊರ ಬರಲು ನನಗೆ ತಿಂಗಳುಗಳೇ ಹಿಡಿದವು ಎಂದು ಬಹಿರಂಗ ಪಡಿಸಿದ್ದಾರೆ.
ಕ್ರಿಕೆಟ್ ವೃತ್ತಿ ಬದುಕನ್ನು ಇಲ್ಲಿಯೇ ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿತ್ತು. ನನ್ನನ್ನು ನಾನು ಮುಂದಿನ ಸವಾಲಿಗೆ ಸಿದ್ಧ ಪಡಿಸಿಕೊಳ್ಳುವುದೇ ದೊಡ್ಡ ಚಾಲೆಂಜ್ ಆಗಿತ್ತು. 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನತ್ತ ನನ್ನ ದೃಷ್ಟಿ ಕೇಂದ್ರಿಕರಿಸಲು ಆರಂಭಿಸಿದೆ. ಈಗ ನಾನು ನನ್ನ ನೆನಪುಗಳನ್ನು ಸುಲಭವಾಗಿ ಹೇಳಿಕೊಳ್ಳುತ್ತಿದ್ದೇನೆ. ಆದರೆ ಆ ಸ್ಥಿತಿಯಲ್ಲಿ ಹೀಗೆ ಹೇಳುವುದು ತುಂಬ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.