ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಬೆಂಗಳೂರಿನಲ್ಲಿ ಬುಧವಾರದಿಂದ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯದ ಮುನ್ನ ದಿನ ರೋಹಿತ್ ಶರ್ಮಾ, ಪತ್ರಕರ್ತರೊಂದಿಗೆ ಮಾತನಾಡಿದರು. ಈ ವೇಳೆ ಅವರು ಮೊಹಮ್ಮದ್ ಶಮಿ ಅವರ ಗಾಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ರೋಹಿತ್ ಶರ್ಮಾ ನೀಡಿರುವ ಹೇಳಿಕೆಯನ್ನು ಕೇಳಿ ಟೀಮ್ ಇಂಡಿಯಾದ ಅಭಿಮಾನಿಗಳ ಟೆನ್ಷನ್ ಇನ್ನು ಹೆಚ್ಚಾಗಿದೆ. ಶಮಿ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಟೀಮ್ ಇಂಡಿಯಾದ ಭಾಗವಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಆ ಕನಸು ನನಸಾಗಿಯೇ ಉಳಿದಿದೆ. ಇನ್ನು ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಸೇರಿಕೊಳ್ಳುತ್ತಾರೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ರೋಹಿತ್ ಅವರ ಮಾತುಗಳನ್ನು ಕೇಳಿದರೆ ಅದು ಸಹ ಕಮರಿದಂತೆ ಕಾಣುತ್ತಿದೆ.

ಮೊಹಮ್ಮದ್ ಶಮಿ ಗಾಯಕ್ಕೆ ತುತ್ತಾಗಿದ್ದಾರೆ. ಅವರ ಮೊಣಕಾಲಿಗೆ ಬಾವು ಬಂದಿದೆ. ಹೀಗಾಗಿ ಅವರು ಮತ್ತೆ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಶಮಿ ಅವರಿಗೆ ಮತ್ತೆ ತಮ್ಮ ಗಾಯ ವಾಸಿಯಾಗುವವರೆಗೆ ಕಾಯಬೇಕು. ಸದ್ಯ ಶಮಿ ಡಾಕ್ಟರ್ ಹಾಗೂ ಫಿಜಿಯೋ ಅವರ ಮೇಲ್ವಿಚಾರಣೆಯಲ್ಲಿ ಎನ್ಸಿಎದಲ್ಲಿ ಇದ್ದಾರೆ. ಶಮಿ ಸಂಪುರ್ಣ ಫಿಟ್ ಆಗದೇ ಇದ್ದಲ್ಲಿ, ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದುಕೊಂಡು ಹೊಗುವುದು ಕಷ್ಟ. ನಿಜ ಹೇಳಬೇಕೆಂದರೆ ಆಸೀಸ್ ಪ್ರವಾಸಕ್ಕೂ ಮುನ್ನ ಅವರು ತಂಡ ಸೇರಿಕೊಳ್ಳುವುದು ಕಷ್ಟವಾಗಿದೆ ಎಂದಿದ್ದಾರೆ.
ಮೊಹಮ್ಮದ್ ಶಮಿ ತಾವು ಭಾರತ ತಂಡವನ್ನು ಸೇರುವ ಮುನ್ನ ಪಶ್ಚಿಮ ಬಂಗಾಳ ಪರ ರಣಜಿ ಟೆಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವದಾಗಿ ತಿಳಿಸಿದ್ದರು. ಆದರೆ ಗಾಯದಿಂದಾಗಿ ಅವರು ಮತ್ತೆ ರಣಜಿ ತಂಡದಿಂದ ಹೊರಗುಳಿಯಬೇಕಾಯಿತು.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಡಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಈ ಬಾರಿ ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗುತ್ತಿದೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಲಾಗುವುದು. ಈ ಸರಣಿಯಲ್ಲಿ ಸಣ್ಣ ಮಿಸ್ಟೇಕ್ ಸಹ ತಂಡದ ಮೇಲೆ ಪರಿಣಾಮ ಬೀರಲಿದೆ. ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಯಾವೆಲ್ಲಾ ತಂಡಗಳು ಫೈನಲ್ಗೆ ಪ್ರವೇಶ ಪಡೆಯಲಿವೆ ಎಂಬ ಬಗ್ಗೆ ಈ ಸರಣಿಯಲ್ಲಿ ಸ್ಪಷ್ಟ ಉತ್ತರ ಲಭಿಸಲಿದೆ.
ಟೀಮ್ ಇಂಡಿಯಾ ಸದ್ಯ ಭರ್ಜರಿ ಫಾರ್ಮ್ನಲ್ಲಿದೆ. ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಅಲ್ಲದೆ ಟೀಮ್ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ಆಡಿದ ಧಾಟಿ ಎಲ್ಲರ ಚಿತ್ತ ಕದ್ದಿತ್ತು. ಎರಡನೇ ಟೆಸ್ಟ್ ಪಂದ್ಯ ಎರಡನೇ ಹಾಗೂ ಮೂರನೇ ದಿನ ಮಳೆ ಕಾಟ ನೀಡಿದ್ದರಿಂದ ಪಂದ್ಯ ನಡೆದಿರಲಿಲ್ಲ. ಆದರೆ ನಾಲ್ಕನೇ ಹಾಗೂ ಐದನೇ ದಿನದಾಟದಲ್ಲಿ ಆರ್ಭಟ ನಡೆಸಿದ್ದ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿತ್ತು. ಟೀಮ್ ಇಂಡಿಯಾ ಪ್ರತಿ ಪಂದ್ಯದಲ್ಲೂ ಗೆಲುವಿನ ಕನಸು ಕಾಣುತ್ತಿದೆ.