ಭಾರತ ತಂಡ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಂಗಳವಾರ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ಹಲವು ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದರು.
ಸತತ 45 ದಿನಗಳ ಅಂತರದ ನಂತರ ಟೀಮ್ ಇಂಡಿಯಾ ಮತ್ತೊಮ್ಮೆ ಮೈದಾನಕ್ಕೆ ಮರಳಲಿದ್ದು, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಬಾಂಗ್ಲಾದೇಶ ಬರುತ್ತಿದೆ. ಹೀಗಾಗಿ ಉಭಯ ತಂಡಗಳ ಟೆಸ್ಟ್ ಸರಣಿ ಭಾರೀ ಕುತೂಹಲ ಮೂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಬಾಂಗ್ಲಾದೇಶದ ಇತ್ತೀಚಿನ ಫಾರ್ಮ್ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಅವರು ತಮಾಷೆಯ ಉತ್ತರವನ್ನು ನೀಡಿದರು. 'ಎಲ್ಲಾ ತಂಡಗಳು ಭಾರತವನ್ನು ಸೋಲಿಸಲು ಬಯಸುತ್ತವೆ. ನಾವು ಸೋಲುತ್ತೇವೆ ಎಂದು ಸಹಾ ಸಂತೋಷಪಡುತ್ತಾರೆ. ಅವರೂ (ಬಾಂಗ್ಲಾದೇಶ) ಸಂತೋಷವಾಗಿರಲಿ. ಬಾಂಗ್ಲಾದೇಶ ಅಥವಾ ಆಸ್ಟ್ರೇಲಿಯಾ ಇರಲಿ, ಟೀಮ್ ಇಂಡಿಯಾ ಎದುರಾಳಿಯನ್ನು ನೋಡಿ ತಂತ್ರಗಳನ್ನು ರೂಪಿಸುವುದಿಲ್ಲ. ಬದಲಿಗೆ ನಮ್ಮ ಆಟದ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ' ಎಂದು ಟೀಮ್ ಇಂಡಿಯಾ ಗೆಲುವಿನ ರಹಸ್ಯವನ್ನು ತಿಳಿಸಿದ್ದಾರೆ.
ಇದೇ ವೇಳೆ ಅಭ್ಯಾಸ ಪಂದ್ಯದ ಬಗ್ಗೆಯೂ ಕೂಡ ಪ್ರತಿಕ್ರಿಯಿಸಿದ ರೋಹಿತ್, 'ಬಾಂಗ್ಲಾದೇಶದ ಸರಣಿಯು ಅಭ್ಯಾಸಕ್ಕಾಗಿ ಅಲ್ಲ. ಪ್ರತಿಯೊಂದು ಪಂದ್ಯವೂ ಅಷ್ಟೇ ಮಹತ್ವದ್ದಾಗಿದೆ. ಎಲ್ಲಿ ಆಡಿದರೂ ನಾವು ಸರಣಿಯನ್ನು ಗೆಲ್ಲಲು ಬಯಸುತ್ತೇವೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನೂ ಯೋಚಿಸುವುದಿಲ್ಲ. ಕೇವಲ ಎದುರಾಳಿಯನ್ನು ಹೇಗೆ ಸೋಲಿಸಬೇಕು ಎಂಬುದರ ಮೇಲೆ ಗಮನ ಹರಿಸುತ್ತೇವೆ.
ಭಾರತವು ವಿಶ್ವದ ಎಲ್ಲಾ ಅಗ್ರ ತಂಡಗಳ ವಿರುದ್ಧ ಆಡಿದೆ. ಆದ್ದರಿಂದ ಸಂಪೂರ್ಣವಾಗಿ ವಿಭಿನ್ನ ತಂತ್ರವನ್ನು ರಚಿಸುವ ಅಗತ್ಯವಿಲ್ಲ. ಇದಲ್ಲದೆ, ಬೌಲರ್ಗಳ ಬಗ್ಗೆ ಹೇಳುವುದಾದರೆ, ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದರ ಮೇಲೆ ಕೆಲವು ಯೋಜನೆಗಳನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿರುವ ಕಾರಣ ನಾಲ್ಕನೇ ಸ್ಥಾನಲ್ಲಿರುವ ಬಾಂಗ್ಲಾದೇಶವು ಪ್ರಬಲ ಸವಾಲನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಟೀಮ್ ಇಂಡಿಯಾವನ್ನು ತವರಿನಲ್ಲಿ ಸೋಲಿಸುವುದು ಸುಲಭದ ಮಾತಲ್ಲ.