ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಲ್ಲಿ ಒಬ್ಬರು ರೋಹಿತ್ ಶರ್ಮಾ. ಭಾರತದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಇವರಿಗೂ ಸ್ಥಾನ. 2024ರಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಟಿ20 ವಿಶ್ವಕಪ್ ಗೆದ್ದ ತಂಡದ ನಾಯಕ. ಆದರೆ ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದು, ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಬಿಸಿಸಿಐ ಸಹ ತಲೆ ಕೆಡಿಸಿಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯ ಬಳಿಕ ಹಿಟ್ ಮ್ಯಾನ್ ಭವಿಷ್ಯ ನಿರ್ಧಾರವಾಗಲಿದೆ.
ಬಿಸಿಸಿಐ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ವೇಳೆ ಮೂರು ಫಾರ್ಮೆಟ್ಗಳಲ್ಲಿ ಆಡುವ ಆಟಗಾರರನ್ನು ಬಿಸಿಸಿಐ ನೋಡುತ್ತಿದೆ. ರನ್ ಕಲೆ ಹಾಕುವಲ್ಲಿ ವಿಫಲರಾದರೆ, ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಸಹ ಇದೆ. ಈ ಎಲ್ಲ ಅಂಶಗಳನ್ನು ಗಮನಸಿದಾಗ ಬಿಸಿಸಿಐ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಿದೆ.

ರೋಹಿತ್ ಶರ್ಮಾ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಗೆಲುವಿಗಾಗಿ ಹರಸಹಾಸ ಪಡುತ್ತಿದೆ. ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿ ಸೋಲು, ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಸೋಲು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಹೀನಾಯ ಸೋಲು ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಪ್ರಶ್ನೆ ಮಾಡುವ ಹಾಗೆ ಆಗಿದೆ.
ಚಾಂಪಿಯನ್ಸ್ ಟ್ರೋಫಿ ಮುಗಿದ ಬಳಿಕ ಬಿಸಿಸಿಐ ರೋಹಿತ್ ಶರ್ಮಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ. ಬಿಸಿಸಿಐ ಕೇಳುವ ಪ್ರಶ್ನೆಗಳಿಗೆ ರೋಹಿತ್ ಉತ್ತರ ರೆಡಿ ಇಟ್ಟುಕೊಳ್ಳಬೇಕಾಗಿದೆ. ಇನ್ನು ಬಿಸಿಸಿಐ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮೇಲೆ ಬಿಸಿಸಿಐ ಕಣ್ಣು ನೆಟ್ಟಿದೆ. ಇನ್ನೇನು ಮುಂದಿನ ದಿನಗಳ ಸತತ ಐಸಿಸಿ ಟೂರ್ನಿಗಳು ನಡೆಯಲಿದ್ದು, ಈ ವೇಳೆ ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎತ್ತಲಾಗುತ್ತದೆ.
ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬ ನಾಯಕನ ಹುಡುಕಾಟದಲ್ಲಿ ಬಿಸಿಸಿಐ ಇದೆ. ನಾಯಕತ್ವವನ್ನು ಪಡೆಯುವ ಆಟಗಾರ ಈ ಎರಡೂ ಫಾರ್ಮೆಟ್ಗಳನ್ನು ಆಡಲು ಸಿದ್ಧರಿರಬೇಕು. ರೋಹಿತ್ ಶರ್ಮಾ ಇನ್ನೇನು ಕೆಲವೇ ತಿಂಗಳುಗಳಲ್ಲಿ 38 ವರ್ಷದವರಾಗುತ್ತಾರೆ. 2027ರ ವಿಶ್ವಕಪ್ ವೇಳೆಗೆ 40 ವರ್ಷ ಮುಟ್ಟುತ್ತದೆ. ಕಳೆದ ಕೆಲವು ದಿನಗಳಲ್ಲಿ ರೋಹಿತ್ ಶರ್ಮಾ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದಾರೆ. ಹೀಗಾಗಿಯಯೇ ಇವರು ಬಾರ್ಡರ್ ಗವಾಸ್ಕರ್ ಸರಣಿಯ ಕೊನೆಯ ಪಂದ್ಯವನ್ನು ಆಡಲಿಲ್ಲ.

ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನವನ್ನು ನೀಡಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಸಫಲರಾದರೆ, ಇವರ ನಾಯಕತ್ವ ಇನ್ನಷ್ಟು ದಿನಗಳು ಮುಂದುವರೆಯುತ್ತದೆ. ಇಲ್ಲವಾದಲ್ಲಿ ಇವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಏಳುತ್ತವೆ.