ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಗಾಯಕ್ಕೆ ತುತ್ತಾಗಿರುವ ಅಕ್ಷರ್ ಪಟೇಲ್ ಟೂರ್ನಿಯ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದರು. ಇದೀಗ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಅಕ್ಷರ್ ಗಾಯದ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಕ್ಷರ್ ಪಟೇಲ್ ಪಟೇಲ್ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ನಾಯಕ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ 22ರಿಂದ ಆರಂಭವಾಗಲಿದೆ.

ಏಷ್ಯಾ ಕಪ್ ಸೂಪರ್ 4 ಹಂತದ ಅಂತಿಮ ಪಂದ್ಯ ಬಾಂಗ್ಲಾದೇಶದ ವಿರುದ್ಧ ಆಡಿದ್ದಾಗ ಅಕ್ಷರ್ ಈ ಗಾಯಕ್ಕೆ ತುತ್ತಾಗಿದ್ದರು. ಆ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅದ್ಭುತವಾದ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಆದರೆ ಅವರ ಶ್ಲಾಘನೀಯ ಪ್ರಯತ್ನದ ಹೊರತಾಗಿಯೂ ಭಾರತವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ವಿಫಲವಾಗಿದ್ದರು. ಈ ಸಂದರ್ಭದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದಾರೆ.
ಗಾಯದ ಪ್ರಮಾಣ ತೀವ್ರವಾಗಿದ್ದ ಕಾರಣ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಿಂದ ಅವರು ಹೊರಬಿದ್ದರು. ಅವರ ಬದಲಿಗೆ ಟೀಮ್ ಇಂಡಿಯಾಗೆ ವಾಶಿಂಗ್ಟನ್ ಸುಂದರ್ ಅವರನ್ನು ಸೇರ್ಪಡೆಗೊಳಿಸಲಾಗಿತ್ತು. ಸುಂದರ್ ಫೈನಲ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ನು ಮತ್ತೊಂದೆಡೆ ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಶ್ರೇಯಸ್ ಐಯ್ಯರ್ ಕೂಡ ಏಷ್ಯಾಕಪ್ ಟೂರ್ನಿಯ ಸಂದರ್ಭದಲ್ಲಿ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಗಾಯದಿಂದ ಕಮ್ಬ್ಯಾಖ್ ಮಾಡಿದ್ದ ಶ್ರೇಯಸ್ ಐಯ್ಯರ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಆಡಿದ್ದರು. ಅದು ಕೂಡ ಗ್ರೂಪ್ ಹಂತದಲ್ಲಿ. ಅದಾದ ಬಳಿಕ ಅವರು ಗಾಯಕ್ಕೆ ತುತ್ತಾಗಿರುವ ಕಾರಣ ಆಡುವ ಬಳಗದಿಂದ ಹೊರಗುಳಿದಿದ್ದರು.
ಇನ್ನು ಭಾರತ ತನ್ನ ಮುಂದಿನ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಮೂರು ಪಂದ್ಯಗಳ ಈ ಏಕದಿನ ಸರಣಿ ವಿಶ್ವಕಪ್ಗೆ ಮುನ್ನ ಭಾರತದ ಕೊನೆಯ ದ್ವಿಪಕ್ಷೀಯ ಏಕದಿನ ಸರಣಿಯಾಗಿರಲಿದೆ. ಸೆಪ್ಟೆಂಬರ್ 22ರಿಂದ ಈ ಟೂರ್ನಿ ಆರಂಬವಾಗಲಿದ್ದು ಸೆಪ್ಟೆಂಬರ್ 27ರಂದು ಕೊನೆಯ ಪಂದ್ಯ ಆಡಲಿದೆ.