
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರೀ ಮುಖಭಂಗವನ್ನು ಅನುಭವಿಸಿದೆ. ಈ ಬಾರಿ ಭಾರತ ತಂಡವನ್ನು ತವರಿನಲ್ಲಿಯೇ ಮಣಿಸಿ ತೀರುತ್ತೇವೆ ಎಂಬ ಆತ್ಮವಿಶ್ವಾಸದಿಂದ ಭಾರತಕ್ಕೆ ಬಂದಿದ್ದ ಪ್ಯಾಟ್ ಕಮ್ಮಿನ್ಸ್ ಪಡೆ ಮೊದಲ ಪಂದ್ಯದಲ್ಲಿಯೇ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನೀಡಿದ ಪ್ರದರ್ಶನಕ್ಕೆ ಸ್ವತಃ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಾಗ್ಪುರದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ನೀಡದ ಪ್ರದರ್ಶನದ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆಸ್ಟ್ರೇಲಿಯಾ ತಡ ಕೇವಲ ಒಂದು ಇನ್ನಿಂಗ್ಸ್ನಲ್ಲಿ ಕುಸಿತ ಅನುಭವಿಸಲಿದೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.
ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 400 ರನ್ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಆಸ್ಟ್ರೇಲಿಯ ತನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು 223 ರನ್ಗಳ ಹಿನ್ನಡೆಯಲ್ಲಿತ್ತು. ಮೊದಲ ಇನಿಂಗ್ಸ್ನಲ್ಲಿ ಕೇವಲ 177 ರನ್ಗಳಿಗೆ ಕುಸಿದ ಕಂಡಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಪೈಪೋಟಿ ನೀಡುವ ನಿರೀಕ್ಷೆಯಿತ್ತು. ಆದರೆ ರವಿಚಂದ್ರನ್ ಅಶ್ವಿನ್ ಅವರ ದಾಳಿಯನ್ನು ಎದುರಿಸಲು ವಿಫಲವಾದ ಆಸ್ಟ್ರೇಲಿಯಾ ತಂಡ ಕೇವಲ 91 ರನ್ಗಳಿಗೆ ಆಲೌಟ್ ಆಯಿತುಈ ಮೂಲಕ ಇನ್ನಿಂಗ್ಸ್ ಮತ್ತು 132 ರನ್ಗಳಿಂದ ಹೀನಾಯ ಸೋಲನ್ನು ಕಂಡಿದೆ.
"ಆಸ್ಟ್ರೇಲಿಯಾ ತಂಡ ಒಂದೇ ಸೆಶನ್ನಲ್ಲಿ ಆಲೌಟ್ ಆಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಾವು ಕಠಿಣ ಸವಾಲಿನ ಬೌಲಿಂಗ್ಗೆ ಸಿದ್ದವಾಗಿದ್ದು ಸೆಶನ್ನಿಂದ ಸೆಶನ್ಗೆ ಹೋರಾಟ ನಡೆಸಲು ಯೋಜಿಸಿದ್ದೆವು. ನಾವು ಒಂದೇ ಸೆಶನ್ನಲ್ಲಿ ಅವರು ಆಲೌಟ್ ಆಗಬಹುದು ಎಂದು ಭಾವಿಸಿರಲಿಲ್ಲ" ಎಂದಿದ್ದಾರೆ ರೋಹಿತ್ ಶರ್ಮಾ.
ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ, "ಆಸ್ಟ್ರೇಲಿಯಾ ತಂಡದ ಮಾನಸಿಕ ಸ್ಥಿತಿಯ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ತಂಡದ ಪ್ರದರ್ಶನದ ಬಗ್ಗೆ ನಾನು ಸಂತೋಷಗೊಂಡಿದ್ದು ಇಂಥಾ ಪಿಚ್ಗಳಲ್ಲಿ ನಾವು ಆಡಲು ಇಷ್ಟಪಡುತ್ತೇವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇಂಥಾ ಪಿಚ್ನಲ್ಲಿ ಆಡುತ್ತಿದ್ದೇವೆ. ಯಾಕೆಂದರೆ ನಾವೆಲ್ಲಾ ಇಂಥಾ ಪಿಚ್ನಲ್ಲಿಯೇ ಆಡಿ ಬೆಳೆದಿದ್ದೇವೆ. ಹಾಗಾಗಿ ಪಿಚ್ ಬಗ್ಗೆ ನಾವು ಡ್ರೆಸ್ಸಿಂಗ್ ರೂಮ್ನ್ಲಲಿ ಚರ್ಚೆ ನಡೆಸುವುದಿಲ್ಲ" ಎಂದಿದ್ದಾರೆ.