ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ರನ್ ಬರ ಕೊನೆಯಾಗಿದೆ. 2025ರಲ್ಲಿ ಕೊನೆಗೂ ರೋಹಿತ್ ಶರ್ಮಾ ಮೂರಂಕಿ ಮುಟ್ಟುವ ಕನಸು ನನಸಾಗಿದೆ. ಕಟಕ್ನಲ್ಲಿ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ, ನೆರೆದಿದ್ದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದ್ದಾರೆ. ನಾಯಕನ ಜವಾಬ್ದಾರಿ ಅರಿತು ಬ್ಯಾಟ್ ಮಾಡಿರುವ ರೋಹಿತ್ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಇನ್ನೇನು ಚಾಂಪಿಯನ್ಸ್ ಟ್ರೋಫಿ ಆರಂಭವಾಗುವ ಸಮಯದಲ್ಲಿ ರೋಹಿತ್ ಫಾರ್ಮ್ಗೆ ಮರಳಿರುವುದು ನಿಜಕ್ಕೂ ಟೀಮ್ ಮ್ಯಾನೇಜ್ಮೆಂಟ್ಗೆ ಖುಷಿ ನೀಡಿದೆ.
ಕಟಕ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 304 ರನ್ಗಳಿಗೆ ಆಲೌಟ್ ಆಯಿತು. ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದ ಭಾರತ, ಇನ್ನು 33 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್ಗಳಿಂದ ಪಂದ್ಯವನ್ನು ಗೆದ್ದಿತು. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಹಾಯದಿಂದ 119 ರನ್ ಬಾರಿಸಿದರು. ಇದು ರೋಹಿತ್ ಶರ್ಮಾ ಅವರ ಏಕದಿನ ವೃತ್ತಿ ಜೀವನದ 32ನೇ ಶತಕವಾಗಿದೆ. ಇವರ ಶತಕದ ಆಟಕ್ಕೆ ಪಂದ್ಯ ಶ್ರೇಷ್ಠ ಗರಿ ಸಹ ಸಂದಿದೆ.

ಪಂದ್ಯ ಮುಗಿದ ಬಳಿಕ ಈ ಪಂದ್ಯದ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, ನಿಜಕ್ಕೂ ತಂಡಕ್ಕಾಗಿ ರನ್ ಕಲೆ ಹಾಕಿರುವುದು ಖುಷಿಯ ವಿಚಾರ. ಸರಣಿಯಲ್ಲಿ ಈ ಪಂದ್ಯ ಮಹತ್ವದಾಗಿತ್ತು. ನಾನು ಈ ಪಂದ್ಯದಲ್ಲಿ ವಿಭಿನ್ನ ರೀತಿಯ ಬ್ಯಾಟಿಂಗ್ ಅಭ್ಯಾಸ ನಡೆಸಿದೆ. ಪಂದ್ಯವನ್ನು ಟಿ20 ಗಿಂತ ದೊಡ್ಡದು, ಟೆಸ್ಟ್ಗಿಂತ ಚಿಕ್ಕದು ಎಂದು ಭಾವಿಸಿ ಬ್ಯಾಟ್ ಮಾಡಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕ್ರೀಸ್ನಲ್ಲಿ ನಿಲ್ಲುವುದೇ ನನ್ನ ಗುರಿಯಾಗಿತ್ತು. ಈ ಪಿಚ್ ಕಪ್ಪು ಮಣ್ಣಿನಿಂದ ಕೂಡಿದ್ದರಿಂದ ಆರಂಭದಲ್ಲಿ ತಾಳ್ಮೆಯಿಂದ ಆಡಬೇಕಾಗುತ್ತದೆ ಎಂದಿದ್ದಾರೆ.
ಪರಿಸ್ಥಿತಿಗೆ ಅನುಗುಣವಾಗಿ ಹಾಗೂ ಆಟಗಾರ ತಂಡದ ಅಗತ್ಯಗಳಿಗೆ ಅನುಗುಣವಾಗಿ ಆಡಬೇಕು. ನಾನು ಸಾಧ್ಯವಾದಷ್ಟು ಸಮಯ ಕ್ರೀಸ್ನಲ್ಲಿ ಕಳೆಯಲು ಬಯಸಿದ್ದೆ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲ, ರೋಹಿತ್ ಶರ್ಮಾ ಇಂಗ್ಲೆಂಡ್ನ ತಂತ್ರದ ಬಗ್ಗೆ ಮಾತನಾಡಿದರು. ನನ್ನ ವಿರುದ್ಧದ ತಂತ್ರವೆಂದರೆ ಬಾಡಿ ಟಾರ್ಗೆಟ್ ಮಡಿ ಚೆಂಡುಗಳನ್ನು ಎಸೆಯುವುದು ಅವರ ಗುರಿಯಾಗಿತ್ತು. ಇದರಿಂದ ನಾನು ಶಾಟ್ ಹೊಡೆಯಲು ಕಷ್ಟಾಗುತ್ತದೆ. ಅವರ ತಂತ್ರಕ್ಕೆ ನಾನು ಸಿದ್ಧನಿದ್ದೆ. ಇನ್ನು ನಮ್ಮ ತಂಡದ ಯುವ ಆಟಗಾರರಿಂದ ನಮಗೆ ಒಳ್ಳೆಯ ಸಾಥ್ ಸಿಕ್ಕಿದೆ ಎಂದು ಶ್ಲಾಘಿಸಿದರು.

ಮಿಡ್ಲ್ ಓವರ್ಗಳಲ್ಲಿ ಬ್ಯಾಟಿಂಗ್ ಮಾಡುವುದು ಕೊಂಚ ಕಷ್ಟ. ನಾವು ಈ ವೇಳೆಯಲ್ಲಿ ಕೊಂಚ ಯಾಮಾರಿದ್ರೂ, ವಿಕೆಟ್ಗಳು ಬೀಳುತ್ತಿದ್ದವು. ಒಂದು ವೇಳೆ ಮಿಡ್ಲ್ ಓವರ್ ನಮ್ಮಂತೆ ಆದರೆ, ಈ ಅವಧಿಯನ್ನು ನಾವು ವಶಕ್ಕೆ ಪಡೆದಲ್ಲಿ, ಡೆತ್ ಓವರ್ಗಳಲ್ಲಿ ಆಡುವುದು ಸುಲಭ ಎಂದು ತಿಳಿಸಿದ್ದಾರೆ.