ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರೀ ಕುತೂಹಲ ಮೂಡಿಸಿದೆ. ಉಭಯ ತಂಡಗಳು ಟೆಸ್ಟ್ ಸರಣಿ ಗೆಲ್ಲಲು ರಣತಂತ್ರ ರೂಪಿಸಲು ತಯಾರಿ ನಡೆಸುತ್ತಿವೆ.
ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಮೇಲೆ ಎಲ್ಲರೂ ಕಣ್ಣು ಇಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಸರಣಿಗೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಇರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸರ್ಫರಾಜ್ ಖಾನ್ ಅಥವಾ ಕೆಎಲ್ ರಾಹುಲ್ ಇಬ್ಬರಲ್ಲಿ ಯಾರು ಆಡುತ್ತಾರೆ ಎಂಬುದು ಕ್ರಿಕೆಟ್ ಗಲ್ಲಿಯಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಹಲವಾರು ತಿಂಗಳುಗಳಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ.
ರಾಹುಲ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಟೀಮ್ ಇಂಡಿಯಾಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅವರ ಹಳೆಯ ಶೈಲಿಯ ಬ್ಯಾಟಿಂಗ್ ಪ್ರದರ್ಶನ ಕಂಡುಬಂದಿಲ್ಲ. ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಪುನರಾಗಮನ ಮಾಡಿದ್ದರು. ಆದರೆ ಗಾಯಗೊಂಡ ನಂತರ ಅವರು ಸರಣಿಯಿಂದ ದೂರ ಉಳಿಯಬೇಕಾಯಿತು.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ರಾಹುಲ್ ಭರ್ಜರಿ ಶತಕ ಬಾರಿಸಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಸರ್ಫರಾಜ್ ಹೋಲಿಸಿದರೆ ಕೆಎಲ್ ರಾಹುಲ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.
ಸುದ್ದಿಗೋಷ್ಠಿಯಲ್ಲಿ ಕೆಎಲ್ ರಾಹುಲ್ ಬಗ್ಗೆ ಮಾತನಾಡಿದ ರೋಹಿತ್, 'ಪ್ರತಿಯೊಬ್ಬರ ವೃತ್ತಿಜೀವನದಲ್ಲಿ ಏರಿಳಿತಗಳಿವೆ. ಉತ್ತಮ ವಿಷಯವೆಂದರೆ ಅವರನ್ನು ಅರ್ಥಮಾಡಿಕೊಳ್ಳುವುದು. ಕೆಎಲ್ ರಾಹುಲ್ ಅವರಲ್ಲಿರುವ ಗುಣ ಎಲ್ಲರಿಗೂ ಗೊತ್ತು. ನಮ್ಮ ಕಡೆಯಿಂದ ಅವರಿಗೆ ಸಂದೇಶವೆಂದರೆ ಎಲ್ಲಾ ಮಾದರಿ ಕ್ರಿಕೆಟ್ಗಳನ್ನು ಆಡಬೇಕು. ಅವರಿಗೆ ಏನು ಬೇಕು ಎಂಬುದರ ಕುರಿತು ಸ್ಪಷ್ಟ ಸಂದೇಶವನ್ನು ನೀಡುವುದು ಮುಖ್ಯ. ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ ತಂಡಕ್ಕೆ ವಾಪಸಾದ ಬಳಿಕ ಉತ್ತಮ ಪ್ರದರ್ಶನ ನೀಡಿದರು.
ದುರದೃಷ್ಟವಶಾತ್ ಅವರು ಹೈದರಾಬಾದ್ ಟೆಸ್ಟ್ ನಂತರ ಗಾಯಗೊಂಡು ಸರಣಿಯಿಂದ ದೂರ ಉಳಿದರು. ಅವರಿ ಹಲವು ಅವಕಾಶಗಳಿದ್ದು, ತಮ್ಮ ವೃತ್ತಿಜೀವನವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಲು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಸರಣಿಯಲ್ಲಿ ಸರ್ಫರಾಜ್ ಖಾನ್ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ. ಆದರೆ ಭಾರತ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಮರಳಿರುವುದರಿಂದ ಅವರು ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದೆ ಬೆಂಚ್ ಕಾಯುವ ಪರಿಸ್ಥಿತಿ ಎದುರಾಗಬಹುದು. ದುಲೀಪ್ ಟ್ರೋಫಿಯ ಎರಡನೇ ಸುತ್ತಿನಿಂದಲೂ ಸರ್ಫರಾಜ್ಗೆ ವಿಶ್ರಾಂತಿ ನೀಡಿಲ್ಲ. ಮೊದಲ ಟೆಸ್ಟ್ನಲ್ಲಿ ಅವರು ಪ್ಲೇಯಿಂಗ್ ಇಲೆವೆನ್ ಭಾಗವಾಗುವುದಿಲ್ಲ ಎಂಬುದಕ್ಕೆ ಇದು ದೊಡ್ಡ ಸೂಚನೆಯಾಗಿದೆ.