
ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಕೂಗು ಇತ್ತೀಚೆಗೆ ಕೇಳಿ ಬರತೊಡಗಿದೆ. ಕೆಲ ಪ್ರಮುಖ ಮಾಜಿ ಆಟಗಾರರು ಟಿ20 ಮಾದರಿಯಲ್ಲಿ ನಾಯಕತ್ವವನ್ನು ರೋಹಿತ್ ಶರ್ಮಾಗೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಭಾರತದ ಮಾಜಿ ಆಟಗಾರ ಚೇತನ್ ಶರ್ಮಾ ಈಗ ಆ ಬದಲಾವಣೆ ಬೇಡ ಎಂದಿದ್ದಾರೆ.
ಟೀಮ್ ಇಂಡಿಯಾದಲ್ಲಿ ಈಗ ನಾಯಕತ್ವವನ್ನು ವಿಭಜಿಸುವುದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಚೇತನ್ ಶರ್ಮಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಓರ್ವ ಅದ್ಭುತ ಕ್ರಿಕೆಟಿಗ, ನಾಯಕನಾಗಿ ಸಿಕ್ಕ ಅವಕಾಶದಲ್ಲಿ ರೋಹಿತ್ ಶರ್ಮಾ ಅದ್ಭುತವಾಗಿ ನಿಭಾಯಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡುವುದು ಬೇಡ ಎಂದಿದ್ದಾರೆ ಚೇತನ್ ಶರ್ಮಾ.
ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಐಸಿಸಿ ಟೂರ್ನಮೆಂಟ್ಗಳಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಕಳೆದ ಏಕದಿನ ವಿಶ್ವಕಪ್ನಲ್ಲೂ ಭಾರತ ಸೆಮಿ ಫೈನಲ್ನಲ್ಲಿ ಹೊರಬಿದ್ದಿತ್ತು. ಈಗ ಮತ್ತೊಂದು ಮಾದರಿಯ ವಿಶ್ವಕಪ್ನ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯಾಗಲಿ ಎಂಬ ಕೂಗು ಕೇಳಿ ಬರುತ್ತಿದೆ.
ಮತ್ತೊಂದೆಡೆ ನಾಯಕನಾಗಿ ರೋಹಿತ್ ಶರ್ಮಾ ಪ್ರದರ್ಶನ ಅದ್ಭುತವಾಗಿದೆ. ಐಪಿಎಲ್ನಲ್ಲಿ ಅತ್ಯಂತ ಯಶಸ್ವೀ ನಾಯಕ ಎಂಬ ಹಣೆಪಟ್ಟಿಯ ಜೊತೆಗೆ ಟೀಮ್ ಇಂಡಿಯಾದಲ್ಲೂ ಸಿಕ್ಕ ಅವಕಾಶದಲ್ಲಿ ರೋಹಿತ್ ಶರ್ಮಾ ನಮ್ಮ ನಾಯಕತ್ವದ ಗುಣವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಕೂಗಿಗೆ ಬಲ ಬಂದಿದೆ.
ಆದರೆ ಚೇತನ್ ಶರ್ಮಾ ಟೀಮ್ ಇಂಡಿಯಾದಲ್ಲಿ ಆತುರವಾಗಿ ನಾಯಕತ್ವ ಬದಲಾವಣೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ. ಮುಂದಿನ ಟಿ20 ವಿಶ್ವಕಪ್ವರೆಗೂ ಈ ನಾಯಕತ್ವದ ಬದಲಾವಣೆ ಬೇಡ. ತಾನಾಗಿಯೇ ನಾಯಕತ್ವ ಬಿಟ್ಟುಕೊಡುವ ನಿರ್ಧಾರಕ್ಕೆ ಕೊಹ್ಲಿ ಬಂದರೆ ಅದು ಬೇರೆ. ಇಲ್ಲವಾದರೆ ಟಿ20 ವಿಶ್ವಕಪ್ ಫಲಿತಾಂಶದವರೆಗೂ ಕಾಯುವುದು ಒಳ್ಳೆಯದು ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಚೇತನ್ ಶರ್ಮಾ.