
ಬೆಂಗಳೂರು: ಮುಂಬರಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋವಿಡ್-19 ಹತ್ತಿಕ್ಕಲು ನೆರವು ನೀಡಿದ ಹೀರೋಗಳಿಗೆ ಗೌರವ ಸಲ್ಲಿಸಲಿದೆ. ಆರ್ಸಿಬಿ ಈಗಾಗಲೇ 'ಮೈ ಕೋವಿಡ್ ಹೀರೋಸ್' (ನನ್ನ ಕೋವಿಡ್ ವೀರರು) ಎಂಬ ಹೆಸರಿನ ಜೆರ್ಸಿ ಹೊರ ತಂದಿದೆ.
ಐಪಿಎಲ್ ಅಭ್ಯಾಸದ ವೇಳೆ ಮತ್ತು ಇಡೀ ಟೂರ್ನಿಯುದ್ದಕ್ಕೂ ಆರ್ಸಿಬಿ ಈ ವಿಭಿನ್ನ ಜೆರ್ಸಿ ಧರಿಸಲಿದೆ. ಜೆರ್ಸಿಯ ಹಿಂಬಾಗದಲ್ಲಿ ಆಟಗಾರರ ಸಂಖ್ಯೆ ಇರುವ ಭಾಗದಲ್ಲಿ 'ಮೈ ಕೋವಿಡ್ ಹೀರೋಸ್' ಎಂದು ಪ್ರಿಂಟ್ ಹಾಕಲಾಗಿದೆ. ಕೊರೊನಾ ಸಂಕಷ್ಟದ ವೇಳೆ ಶ್ರಮಿಸಿದ ಎಲ್ಲಾ ಭಾರತೀಯರಿಗೆ ಆರ್ಸಿಬಿ ಈ ಮೂಲಕ ಗೌರವ ಸಲ್ಲಿಸುತ್ತಿದೆ.
ಆರ್ಸಿಬಿ ತಂಡ 'ಗಿವ್ಇಂಡಿಯಾ' ಚಾರಿಟಿ ಸಂಸ್ಥೆಗೂ ನೆರವಿನ ಹಸ್ತ ನೀಡಲು ಯೋಚಿಸಿದೆ. ಈ ಸೀಸನ್ನಲ್ಲಿ ಮೊದಲ ಪಂದ್ಯದ ವೇಳೆ ಧರಿಸುವ ಆಟಗಾರರ ಜೆರ್ಸಿಯನ್ನು ಆರ್ಸಿಬಿ ಹರಾಜಿಗಿಡಲಿದೆ. ಅಲ್ಲಿ ಬಂದ ಹಣವನ್ನು ಗಿವ್ಇಂಡಿಯಾ ಸಂಸ್ಥೆಗೆ ನೀಡಲಿದೆ.
ಕೊರೊನಾ ವೀರರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊರ ತರಲಾಗಿರುವ ಜೆರ್ಸಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಸಿಬಿ ಅಧ್ಯಕ್ಷ ಸಂಜೀವ್ ಚೂರಿವಾಲ, 'ರಾಯಲ್ ಚಾಲೆಂಜರ್ಸ್ ತಂಡ ಯಾವತ್ತಿಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಆಡುವುದಕ್ಕೋಸ್ಕರ ನಿಂತಿದೆ. ನಮ್ಮ ಕೋವಿಡ್ ಹೀರೋಗಳು ಪಟ್ಟು ಬಿಡದೆ ಶ್ರಮಿಸುವ ಮೂಲಕ ಕೋವಿಡ್ ಹತ್ತಿಕ್ಕುವ ಉದ್ದೇಶ ಸಾಕಾರಗೊಳಿಸುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವೆ,' ಎಂದಿದ್ದಾರೆ.
ಮಾತು ಮುಂದುವರೆಸಿದ ಚೂರಿವಾಲ, 'ಹಲವಾರು ಪೀಳಿಗೆಯಿಂದಲೂ ಮಾನವೀಯತೆ ಶ್ರೇಷ್ಠತೆಯನ್ನು ಉಳಿಸಿಕೊಳ್ಳುತ್ತಾ ಹೋಗುತ್ತಿದೆ. ಈ ಪ್ರಚಾರದ ಮೂಲಕ ನಾವು ಕೋವಿಡ್ ವೀರರ ಸವಾಲಿನ ಮನೋಭಾವಕ್ಕೆ, ಸ್ಫೂರ್ತಿಗೆ ಗೌರವ ಸಲ್ಲಿಸುತ್ತಿದ್ದೇವೆ,' ಎಂದರು.