ಐಪಿಎಲ್ ಫ್ರಾಂಚೈಸಿಗಳು ತಾವು ತಂಡದಲ್ಲಿ ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರನ್ನು ಬಿಸಿಸಿಐಗೆ ಸಲ್ಲಿಸಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಆದರೆ ಈ ಎಲ್ಲದರ ಮಧ್ಯೆ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಟ್ರೇಡ್ ಮಾತುಕತೆ ನಡೆಯುತ್ತಿದೆ. ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ ಅವರ ಟ್ರೇಡ್ ಮಾತುಗಳು ಬಹಳ ಸಮಯದಿಂದ ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಎರಡೂ ತಂಡಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಸಿಎಸ್ಕೆ ಹಾಗೂ ರಾಜಸ್ಥಾನ ತಂಡಗಳು 2 ದಿನಗಳ ಹಿಂದೆ ಎಕ್ಸ್ಪ್ರೆಷನ್ ಆಫ್ ಇಂಟ್ರಸ್ಟ್ನ್ನು ಬಿಸಿಸಿಐಗೆ ಸಲ್ಲಿಕೆ ಮಾಡಿವೆ. ಆದರೆ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಅದಕ್ಕೆ ಕಾರಣ ಆ ಒಂದು ಪ್ಲೇಯರ್.
ಟ್ರೇಡ್ ಮಾಡಿಕೊಳ್ಳುವಾಗ ತಂಡಗಳಲ್ಲಿ ಆಯಾ ಸ್ಥಾನಗಳು ಖಾಲಿ ಇರಬೇಕಾಗುತ್ತದೆ. ಅಲ್ಲದೆ ಆಯಾ ಆಟಗಾರರಿಗೆ ಹಿಂದಿನ ಹರಾಜಿನಲ್ಲಿ ನೀಡಿದ ಮೊತ್ತದಷ್ಟು ಹಣ ಇರಬೇಕಾಗುತ್ತದೆ. ಇಲ್ಲವೇ ಟ್ರೇಡ್ ಮಾಡಿಕೊಂಡು ಈ ವ್ಯವಹಾರವನ್ನು ಬಗೆ ಹರಿಸಿಕೊಳ್ಳಬಹುದಾಗಿದೆ. ರಾಜಸ್ಥಾನ ಸಂಜು ಸ್ಯಾಮ್ಸನ್ ಅವರನ್ನು ಬಿಡಲು ಒಪ್ಪಿದ್ದು, ಅದರ ಬದಲಿಗೆ ಇಬ್ಬರು ಆಟಗಾರರ ಬೇಡಿಕೆ ಇಟ್ಟಿದೆ. ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್. ಈಗ ಸಮಸ್ಯೆ ಆಗಿರುವುದು ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರನ್.

ವರದಿಗಳ ಪ್ರಕಾರ ಸ್ಯಾಮ್ ಕರನ್ರನ್ನು ಟ್ರೇಡ್ ಮಾಡಿಕೊಳ್ಳಲು ರಾಜಸ್ಥಾನ ರಾಯಲ್ಸ್ಗೆ ದೊಡ್ಡ ಸಮಸ್ಯೆ ಅಂದರೆ, ತಂಡದಲ್ಲಿ ವಿದೇಶಿ ಆಟಗಾರರ ಕೋಟಾ ಸಂಪೂರ್ಣ ಫುಲ್ ಆಗಿದೆ. ಈ ವೇಳೆ ತಂಡ ತನ್ನ ತಂಡದಲ್ಲಿ ಇರುವ 8 ಆಟಗಾರರಲ್ಲಿ ಒಬ್ಬರನ್ನು ಕೈ ಬಿಡಬೇಕಾಗುತ್ತದೆ. ಆ ಒಬ್ಬ ವಿದೇಶಿ ಆಟಗಾರರನ್ನು ಬಿಡುಗಡೆ ಮಾಡದ ಹೊರತು ಸ್ಯಾಮ್ ಕರನ್ ಖರೀದಿ ಅಸಾಧ್ಯ. ಇಷ್ಟೇ ಅಲ್ಲದೆ ಹಣದ ಸಮಸ್ಯೆ ಸಹ ರಾಜಸ್ಥಾನ ತಂಡವನ್ನು ಕಾಡುತ್ತಿದೆ.
ಅಂದಹಾಗೆ ರಾಜಸ್ಥಾನ ರಾಯಲ್ಸ್ ಪರ್ಸ್ನಲ್ಲಿ ಇನ್ನು 30 ಲಕ್ಷ ರೂ. ಮಾತ್ರ ಉಳಿದಿದೆ. ಆದರೆ ಚೆನ್ನೈ ಸ್ಯಾಮ್ ಕರನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು 2.4 ಕೋಟಿ ರೂ. ಖರ್ಚು ಮಾಡಿದೆ. ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ ಲಂಕಾದ ವನಿಂದು ಹಸರಂಗ್, ಮಹೇಶ್ ತೀಕ್ಷಣ್ ಅವರಿಗೆ ಗೇಟ್ ಪಾಸ್ ನೀಡಬಹುದು. ಹಸರಂಗ್ ಅವರನ್ನು ಆರ್ಆರ್ 5.25 ಕೋಟಿಗೆ ಖರೀದಿಸಿದರೆ, ತೀಕ್ಷಣ್ ಅವರನ್ನು 4.40 ಕೋಟಿ ನೀಡಿ ಖರೀದಿಸಿತ್ತು. ರಾಜಸ್ಥಾನ ಈ ಟ್ರೇಡ್ ಮಾಡಿಕೊಳ್ಳ ಬೇಕಿದ್ದಲ್ಲಿ ತಾನು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಗಡುವಿನ ಮುಂಚಿತವಾಗಿ ರಿಲೀಸ್ ಮಾಡಬೇಕಾಗುತ್ತದೆ.
ಇನ್ನು ರವೀಂದ್ರ ಜಡೇಜಾ ಹಾಗೂ ಸಂಜು ಸ್ಯಾಮ್ಸನ್ ಅವರ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿಲ್ಲ. ಏಕೆಂದರೆ ಭಾರತೀಯ ಆಟಗಾರರು ಒಂದು ತಂಡದಿಂದ ಮತ್ತೊಂದು ತಂಡಕ್ಕೆ ನೇರವಾಗಿ ಹೋಗಬಹುದಾಗಿದೆ.