ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್ ತಂಡ 18ನೇ ಆವೃತ್ತಿಯ ಐಪಿಎಲ್ನಲ್ಲಿ 50ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ಟೂರ್ನಿಯಲ್ಲಿ ಸತತ ಆರನೇ ಗೆಲುವು ದಾಖಲಿಸಿತು. ಜೈಪುರ್ದಲ್ಲಿ ಪೂರ್ಣ 2 ಅಂಕ ಕಲೆ ಹಾಕಿದ ಮುಂಬೈ ಇಂಡಿಯನ್ಸ್ 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 217 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 16.1 ಓವರ್ಗಳಲ್ಲಿ 117 ರನ್ ಸೇರಿಸಿ ಆಲೌಟ್ ಆಯಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ಲೇ ಆಫ್ ಆಸೆ ಕಮರಿದೆ. ಕಾರಣ ರಾಜಸ್ಥಾನ ಆಡಿದ 11 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, 6 ಅಂಕ ಕಲೆ ಹಾಕಿದೆ. ಮುಂದಿನ ಮೂರು ಪಂದ್ಯಗಳನ್ನು ಗೆದ್ದರೂ ರಾಜಸ್ಥಾನ 12 ಅಂಕಗಳನ್ನು ಕಲೆ ಹಾಕಬಹುದಾಗಿದೆ.

218 ರನ್ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಸೊನ್ನೆ ಸುತ್ತಿದರು. ದೀಪಕ್ ಚಹಾರ್ ಎಸೆದ 130 ಗಂಟೆಗೆ ಕಿಲೋ ಮೀಟರ್ ವೇಗದಲ್ಲಿ ಎಸೆದ ಚೆಂಡನ್ನು ವೈಭವ್ ಸೂರ್ಯವಂಶಿ ಮಿಡ್ ಆನ್ ಮೇಲೆ ಸಿಕ್ಸರ್ ಬಾರಿಸಲು ಹೋಗಿ ವಿಲ್ ಜಾಕ್ಸ್ ಹಿಡಿದ ಕ್ಯಾಚ್ಗೆ ಬಲಿಯಾದರು.
ರಾಜಸ್ಥಾನ ರಾಯಲ್ಸ್ ಪರ ಅಮೋಘ ಫಾರ್ಮ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ಸಹ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಎರಡನೇ ಓವರ್ ಬೌಲ್ ಮಾಡಲು ಬಂದ ಟ್ರೆಂಟ್ ಬೌಲ್ಟ್ ಅವರ ಮೇಲೆ ಒತ್ತಡ ಹೇರುವ ತಂತ್ರವನ್ನು ಮಾಡಿದರು. ಇದೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ದಂಡಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಬೌಲ್ಟ್ ಬೋಲ್ಡ್ ಮಾಡಿದರು.
ಮೂರನೇ ವಿಕೆಟ್ಗೆ ನಿತೀಶ್ ರಾಣಾ ಹಾಗೂ ರಿಯಾನ್ ಪರಾಗ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 14 ಎಸೆತಗಳಲ್ಲಿ 23 ರನ್ ಸೇರಿಸಿತು. ನಿತೀಶ್ ರಾಣಾ 9 ರನ್ ಬಾರಿಸಿದ್ದಾಗ ಬೌಲ್ಟ್ ಎಸೆತದಲ್ಲಿ ಔಟ್ ಆದರು. ಇನ್ನು ನಾಯಕ ರಿಯಾನ್ ಪರಾಗ್ ಮೂರು ಬೌಂಡರಿ ನೆರವಿನಿಂದ 8 ಎಸೆತಗಳಲ್ಲಿ 16 ರನ್ ಬಾರಿಸಿ, ಒತ್ತಡವನ್ನು ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು.
ಇನ್ನು ಸ್ಫೋಟಕ ಬ್ಯಾಟರ್ ಶಿಮ್ರೋನ್ ಹೆಟ್ಮೆಯರ್ ತಾವು ಎದುರಿಸಿದ ಮೊದಲ ಎಸೆತದಲ್ಲಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ರಾಜಸ್ಥಾನ ರಾಯಲ್ಸ್ ಪವರ್ ಪ್ಲೇನಲ್ಲಿ ಐದು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಅಗತ್ಯ ರನ್ ಕಲೆ ಹಾಕುವಲ್ಲಿ ರಾಜಸ್ಥಾನ ಬ್ಯಾಟರ್ಗಳು ವಿಫಲರಾದರು. ಶುಭ್ಮನ್ ದುಬೆ (15), ಧ್ರುವ್ ಜುರೇಲ್ (11) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಮಹೀಶ್ ತೀಕ್ಷಣ್ ಸಹ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಕೆಳ ಕ್ರಮಾಮಂಕದಲ್ಲಿ ಜೋಫ್ರಾ ಆರ್ಚರ್ ಸೋಲಿನ ಅಂತರವನ್ನು ಕಡಿಮೆಮಾಡುವಲ್ಲಿ ಶ್ರಮಿಸಿದರು. ಆರ್ಚರ್ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 30 ರನ್ ಸಿಡಿಸಿದರು.
ಮುಂಬೈ ಇಂಡಿಯನ್ಸ್ ಪರ ಬಿಗುವಿನ ದಾಳಿ ನಡೆಸಿದ್ರು. ವೇಗದ ಬೌಲರ್ ಟ್ರೆಂಟ್ ಬೌಲ್ಟ್ 2.1 ಓವರ್ಗಳಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸಿದರು. ಇನ್ನು ಸ್ಪಿನ್ ಬೌಲರ್ ಕರುಣ್ ಶರ್ಮಾ 23 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ಜಸ್ಪ್ರಿತ್ ಬುಮ್ರಾ ತಾವು ಎಸೆದ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಬಳಿಸಿದರು. ದೀಪಕ್ ಚಹಾರ್, ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ಇವರೆಲ್ಲರ ಬಿಗುವಿನ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ 100 ರನ್ಗಳ ಅಮೋಘ ಜಯ ದಾಖಲಿಸಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್ಆರ್ ತಂಡದ ಬೌಲರ್ಗಳು ವಿಫಲರಾದರು. ಇವರು ಪವರ್ ಪ್ಲೇನಲ್ಲಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಮುಂಬೈ ಮೊದಲ 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 58 ರನ್ ಸಿಡಿಸಿದೆ.
ರಯಾನ್ ರಿಕಲ್ಟನ್ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಕುಮಾರ್ ಕಾರ್ತಿಕೇಯ ಎಸೆದ ಇನಿಂಗ್ಸ್ 9ನೇ ಓವರ್ನ ಐದನೇ ಎಸೆತವನ್ನು ರಿಕಲ್ಟನ್ ಮಿಡ್ವಿಕೆಟ್ ಮೇಲೆ 96 ಮೀಟರ್ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇವರು 61 ರನ್ ಸಿಡಿಸಿದ್ದಾಗ ಮಹೀಶ್ ತೀಕ್ಷಣ್ ತೋಡಿದ ಖೆಡ್ಡಾಗೆ ಬಲಿಯಾದರು. ರಯಾನ್ ರಿಕಲ್ಟನ್ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟ್ಗೆ 71 ಎಸೆತಗಳಲ್ಲಿ 116 ರನ್ ಸೇರಿಸಿತು.
ಅಮೋಘ ಫಾರ್ಮ್ನಲ್ಲಿರುವ ರೋಹಿತ್ ಶರ್ಮಾ ಮತ್ತೊಮ್ಮೆ ಅರ್ಧಶತಕ ಬಾರಿಸಿ ಮಿಂಚಿದರು. ಇವರು 36 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 53 ರನ್ ಸಿಡಿಸಿ ಔಟ್ ಆದರು.

13ನೇ ಓವರ್ನಲ್ಲಿ ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ, ಮೂರನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಆಧಾರವಾಯಿತು. ಈ ಜೋಡಿ ತಮ್ಮ ಪವರ್ ಫುಲ್ ಹೊಡೆತಗಳಿಂದ ಎದುರಾಳಿ ಬೌಲರ್ಗಳನ್ನು ಕಾಡಿತು. ಈ ಜೋಡಿ ಕಟ್ಟಿ ಹಾಕುವುದು ರಾಜಸ್ಥಾನ ತಂಡಕ್ಕೆ ದೊಡ್ಡ ಸವಾಲಾಯಿತು. ರಾಜಸ್ಥಾನ ತಂಡದ ಪರ 18ನೇ ಓವರ್ ಬೌಲ್ ಮಾಡಿದ ಫಜಲ್ ಫರೂಕಿ ಅವರ ಓವರ್ನಲ್ಲಿ 21 ರನ್ಗಳು ಹರಿದು ಬಂದವು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 48 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸೇರಿದಂತೆ ಅಜೇಯ 48 ರನ್ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 2 ವಿಕೆಟ್ಗೆ 217 ರನ್ ಸೇರಿಸಿತು.
ರಾಜಸ್ಥಾನ ಪರ ಮಹೀಶ್ ತೀಕ್ಷಣ್, ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಕಬಳಿಸಿದರು.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ, ವಿಶೇಷವಾಗಿ ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ಈ ಕ್ರಮ ಕೈಗೊಂಡಿದೆ. ಮಹಿಳಾ ಸಬಲೀಕರಣದ ಕಡೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಫ್ರಾಂಚೈಸಿ ಈ ಕ್ರಮ ತೆಗೆದುಕೊಂಡಿದೆ. ಮುಂಬೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ ತಂಡದ ಆಟಗಾರರು ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಿ ಮೈದಾನಕ್ಕೆ ಪ್ರವೇಶಿಸಿದರು. ಈ ಜೆರ್ಸಿಯನ್ನು ಕಂಡು ಅಭಿಮಾನಿಗಳು ಕೊಂಚ ಗಲಿಬಿಲಿ ಆದರು.