ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಲೀಗ್ ಉದ್ದಕ್ಕೂ ಸಂಘಟಿತ ಆಟದ ಪ್ರದರ್ಶನ ನೀಡಿದ ಆರ್ಸಿಬಿ ತಂಡ ಅರ್ಹ ಜಯ ಸಾಧಿಸಿ ಇತಿಹಾಸ ನಿರ್ಮಿಸಿತು. ಈ ತಂಡದ ಪರಿಶ್ರಮದ ಹಿಂದೆ ಕನ್ನಡಿಗನ ಕೈವಾಡವಿದೆ.
ಆರ್ಸಿಬಿ ತಂಡದ ಸಹಾಯಕ ಸಿಬ್ಬಂದಿಗಳಲ್ಲಿ ಎದ್ದು ಕಾಣುವ ಹೆಸರು ಆರ್ಎಕ್ಸ್ ಮುರುಳಿಧರ. ಇವರು ಸದ್ಯ ಆರ್ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರ್ಸಿಬಿ ಈ ಬಾರಿ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವಲ್ಲಿ ಇವರ ಬೆವರ ಹನಿ ಸಹ ಇದೆ. ಇವರನ್ನು ದೇಶೀಯ ಸರ್ಕಿಟ್ನಲ್ಲಿ ಚಾಂಪಿಯನ್ ಕೋಚ್ ಎಂದೇ ಹೆಸರುವಾಸಿ. ಇವರು ಕೋಚ್ ಮಾಡುವ ತಂಡ ಎಲ್ಲವೂ ಆಯಾ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿವೆ.

ಆ ಕಾಲದಲ್ಲಿ ತಮ್ಮ ವೇಗದ ಬೌಲಿಂಗ್ ಹಾಗೂ ವೇರಿಯೇಷನ್ನಿಂದಲೇ ಹೆಸರು ಮಾಡಿದ್ದ ಆಟಗಾರ ಆರ್ ಮುರುಳಿಧರ್. ಇವರು ಆಡುವಾಗ ಹೆಚ್ಚಿನ ಅವಕಾಶಗಳು ಸಿಗದೇ ಇದ್ದಾಗ ಹತಾಶರಾದರು. ಅಲ್ಲದೆ ತಮ್ಮಲ್ಲಿನ ಪ್ರತಿಭೆಯನ್ನು ಯಾರೂ ಗುರುತಿಸಲು ಸಾಧ್ಯವಾಗದೇ ಇದ್ದಾಗ ತಾವು ಇಷ್ಟ ಪಟ್ಟ ಕ್ರೀಡೆಗೆ ಗುಡ್ ಬಾಯ್ ಹೇಳಿ, ತರಬೇತಿ ನೀಡುವತ್ತ ಮುಖ ಮಾಡಿದರು. ಅಂದಾಹಾಗೆ ಮುರುಳಿಧರ್ ತಮ್ಮ 26ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡುವುದನ್ನು ಬಿಟ್ಟು ಕಲಿಸಲು ಆರಂಭಿಸಿದರು.
ಕ್ರಿಕೆಟ್ ಆಟದ ಮೂಲಕ ಹೆಸರು ಮಾಡಲು ಆಗದೇ ಇದ್ದಾಗ, ಬೇಸರಗೊಂಡು ಬೇರೆ ಕ್ಷೇತ್ರದತ್ತ ಮುಖ ಮಾಡದ ಇವರು ತರಬೇತಿಯತ್ತ ಮುಖ ಮಾಡಿದರು. ಹಂತ ಹಂತವಾಗಿ ಕೋಚಿಂಗ್ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾ ಸಾಗಿದ ಇವರು ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲು ಆರಂಭಿಸಿದರು. ಕ್ರಿಕೆಟ್ ಆಡುವಾಗ ತಮಗೆ ಬಿದ್ದ ಪೆಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು, ಯುವ ಕ್ರೀಡಾಪಟುಗಳಿಗೆ ನೆರಳಾದರು. ವರ್ಷಗಳ ಕಾಲ ಮುರುಳಿಧರ್ ಕೋಚ್ ಆಗಿ ಬೆವರು ಹರಿಸಿದರೂ ಸಹ ಸಿಗದ ಮನ್ನಣೆ 2024ರಲ್ಲಿ ಸಿಕ್ಕಿತು.

ಅಷ್ಟೊತ್ತಿಗಾಗಲೇ ಮುರುಳಿಧರ್ ಕೋಚಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡುವ ಕನಸಿನ ಬೀಜವನ್ನು ಬಿತ್ತಿದ್ದರು. ದೇಶದ ವಿವಿಧ ರಾಜ್ಯಗಳ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಮುರುಳಿಧರ್ ಅವರಿಗೆ, ಕೆಪಿಎಲ್ ತಂಡದ ಕೋಚ್ ಆಗುವ ಅದೃಷ್ಟವೂ ಲಭಿಸಿತು. ಇವರು ಕೋಚ್ ಮಾಡಿದ ಮೊದಲ ಆವೃತ್ತಿಯಲ್ಲೇ ಬೆಂಗಳೂರು ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಇಲ್ಲಿಂದ ಮುರುಳಿಧರ್ ಹಿಂತಿರುಗಿ ನೋಡಲೇ ಇಲ್ಲ. ಈಗ ಮಹಾರಾಜ ಟ್ರೋಫಿಯಲ್ಲಿ ಮೈಸೂರು ತಂಡದ ಪರ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2024ರ ಆಸುಪಾಸಿನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಆರ್ಸಿಬಿ ತಂಡ ಇವರನ್ನು ಸಂಪರ್ಕಿಸಿ ದೊಡ್ಡ ಜವಾಬ್ದಾರಿ ನೀಡಿತು. ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಇವರು ಮಿಂಚುತ್ತಿದ್ದಾರೆ. ಚೊಚ್ಚಲ ಬಾರಿಗೆ ಆರ್ಸಿಬಿ ಡಬ್ಲ್ಯೂಪಿಎಲ್ ಚಾಂಪಿಯನ್ ಆದಾಗಲೂ ಇವರು ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಈ ಬಾರಿ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರಿದಾಗಲೂ ಇವರೇ ಬ್ಯಾಟಿಂಗ್ ಕೋಚ್ ಸ್ಥಾನವನ್ನು ತುಂಬಿದ್ದಾರೆ.
ಮುರುಳಿಧರ್ ಅವರ ಗರಡಿಯಲ್ಲಿ ಪಳಗಿದ ಅದೆಷ್ಟೋ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಅಷ್ಟೇ ಏಕೆ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ತಿರುಪ್ಪೂರು ತಮಿಜಾನ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಆಗಲೂ ಆ ತಂಡಕ್ಕೆ ಇವರೇ ಕೋಚ್ ಆಗಿ ಕೆಲಸ ಮಾಡಿದ್ದಾರೆ.