
ಭಾರತದ ಮಾಜಿ ವಿಕೆಟ್ ಕೀಪರ್ ಸಬಾ ಕರೀಮ್ ಭಾರತೀಯ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಆಪರೇಶನ್ನ ಪ್ರಧಾನ ಪ್ರಬಂಧಕ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಕಳೆದವಾರ ಸಿಇಒ ಆಗಿದ್ದ ರಾಹುಲ್ ಜೋಹ್ರಿ ರಾಜೀನಾಮೆ ನೀಡಿ ನಿರ್ಗಮಿಸಿದ್ದರು.
ಬಿಸಿಸಿಐ ಸಬಾ ಕರೀಮ್ ಅವರಿಗೆ ರಾಜೀನಾಮೆ ನೀಡಿ ಅಥವಾ ಉಚ್ಚಾಟನೆಯನ್ನು ಎದುರಿಸಿ ಎಂದು ಸೂಚಿಸಿತ್ತು ಎಂದು ತಿಳಿದುಬಂದಿದೆ. ಬಿಸಿಸಿಐ ಹೊಸ ವೃತ್ತಿಪರರೊಂದಿಗೆ ಕೆಲಸ ಮಾಡಲು ಬಯಸಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎನ್ನವ ಮಾತುಗಳು ಕೇಳಿ ಬಂದಿದೆ.
ದೇಶೀಯ ಕ್ರಿಕೆಟ್ ಬೆಳವಣಿಕೆಯಲ್ಲಿ ಕರೀಮ್ ಮಹತ್ವದ ಪಾತ್ರವಹಿಸಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ಈಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕ ಮಾಡುವಲ್ಲಿಯೂ ಕರೀಮ್ ಸಲಹೆ ಮುಖ್ಯ ಪಾತ್ರವಹಿಸಿತ್ತು. ಕರೀಮ್ 2018ರ ಜನವರಿಯಲ್ಲಿ ಹುದ್ದೆಯನ್ನು ವಹಿಸಿಕೊಂಡಿದ್ದರು.
ಬಿಸಿಸಿಐ ಸೂಚನೆಯ ಹಿನ್ನೆಲೆಯಲ್ಲಿ ಸಬಾ ಕರೀಮ್ ಜುಲೈ 18 ರಂದು ಬಿಸಿಸಿಐ ಕಾರ್ಯದರ್ಸಿ ಜಯ್ ಶಾ ಹಾಗೂ ಅಧ್ಯಕ್ಷ ಸೌರವ್ ಗಂಗೂಲಿಗೆ ತನ್ನ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದಾರೆ. ಕರೀಮ್ ರಾಜಿನಾಮೆ ಅಂಗೀಕಾರವಾಗಿರುವುದನ್ನು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ನಾವು ರಾಜಿನಾಮೆಯನ್ನು ಸ್ವೀಕರಿಸಿದ್ದೇವೆ. ಅವರು ತಮ್ಮ ಸೂಚನಾ ಅವಧಿಯನ್ನು ಪೂರೈಸಿದ್ದಾರೆ. ಕ್ರಿಕೆಟ್ ಮಂಡಳಿಯು ಕ್ರಿಕೆಟ್ ಆಪರೇಶನ್ನ ನೀತನ ಜಿಎಂ ಹುದ್ದೆಯನ್ನು ಭರ್ತಿ ಮಾಡಲು ಪದಾಧಿಕಾರಿಗಳಿಗೆ ಅಪೆಕ್ಸ್ ಕೌನ್ಸಿಲ್ ಅಧಿಕಾರವನ್ನು ನೀಡಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.