
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು ಪಂದ್ಯಗಳಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ಭಾರತದ ಉಪನಾಯಕನ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ತೆರವಾಗಿರುವ ಈ ಸ್ಥಾನಕ್ಕೆ ಆಯ್ಕೆ ಮಂಡಳಿ ಸದ್ಯ ಯಾರನ್ನು ಕೂಡ ಆಯ್ಕೆ ಮಾಡಿಲ್ಲ. ಹೀಗಾಗಿ ಮುಂದಿನ ಉಪನಾಯಕ ಯಾರಾಗಬಹುದು ಎಂಬ ಚರ್ಚೆಗಳು ನಡೆಯುತ್ತಿದೆ. ಮಾಜಿ ಕ್ರಿಕೆಟಿಗ ಸಬಾ ಕರೀಮ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಯುವ ಕ್ರಿಕೆಟಿಗ ರಿಷಭ್ ಪಂತ್ ಹೆಸರು ಸೂಚಿಸಿದ್ದಾರೆ.
ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೇರಿದಂತೆ ಮುಂದಿನ ಕೆಲ ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವುಳಿದಿರುವ ಪಂತ್ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ.
ಇಂಡಿಯಾ ನ್ಯೂಸ್ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸಬಾ ಕರೀಮ್ ಎಲ್ಲರೂ ಕೂಡ ರಿಷಭ್ ಪಂತ್ ಕಮ್ಬ್ಯಾಕ್ಗೆ ಎದುರುನೋಡುತ್ತಿದ್ದಾರೆ ಎಂದಿದ್ದು ಭಾರತದ ಟೆಸ್ಟ್ ತಂಡದ ಉಪನಾಯಕನ ಸ್ಥಾನಕ್ಕೆ ಪಂತ್ ಉತ್ತಮವಾದ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.
"ಭಾರತ ಟೆಸ್ಟ್ ತಂಡಕ್ಕೆ ಉಪನಾಯಕನನ್ನು ಆಯ್ಕೆ ಮಾಡದೇ ಇರುವುದಕ್ಕೆ ಕಾರಣವಿದೆ. ಎಲ್ಲರು ಕೂಡ ರಿಷಭ್ ಪಂತ್ ಅವರ ವಾಪಾಸಾತಿಗೆ ಕಾಯುತ್ತಿದ್ದಾರೆ. ಆತ ಆ ಸ್ಥಾನಕ್ಕೆ ಬೆಳೆದಿದ್ದಾರೆ ಕೂಡ. ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಆವೃತ್ತಿಗೆ ಯಾರು ತಂಡವನ್ನು ಮು್ನನಡೆಸುತ್ತಾರೆ ಎಂಬುದನ್ನು ಕೂಡ ನಾವು ಗಣನೆಗೆ ತೆಗೆದುಕೊಳ್ಳಬೇಕು" ಎಂದಿದ್ದಾರೆ ಸಬಾ ಕರೀಮ್.
ಇನ್ನು ಮುಂದುವರಿದು ಮಾತನಾಡಿದ ಅವರು ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಭಾರತದ ಟೆಸ್ಟ್ ತಂಡಕ್ಕೆ ಉಪನಾಯಕನ ಸ್ಥಾನಕ್ಕೆ ಅರ್ಹತೆಯಿರುವ ಇಬ್ಬರು ಆಟಗಾರರು ಎಂದಿದ್ದಾರೆ. "ನನ್ನಲ್ಲಿ ಕೇಳಿದರೆ ಉಪನಾಯಕನ ಸ್ಥಾನಕ್ಕೆ ಕೇವಲ ಇಬ್ಬರು ಸೂಕ್ತ ಆಟಗಾರರು ಮಾತ್ರವೇ ಇದ್ದಾರೆ. ಅದು ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ. ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಪಂತ್ ದೊಡ್ಡ ಗಾಯದ ಸಮಸ್ಯೆಗೆ ಒಳಗಾಗಿಲ್ಲ. ಈ ಅಪಘಾತ ದುರದೃಷ್ಟಕರ ಸಂಗತಿ. ಅದನ್ನು ಹೊರತುಪಡಿಸಿದರೆ ಪಂತ್ಗೆ ಯಾವುದೇ ಗಾಯದ ಹಿನ್ನೆಲೆಗಳು ಇಲ್ಲ" ಎಂದಿದ್ದಾರೆ ಸಬಾ ಕರೀಮ್.
ಇನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹರ್ಭಜನ್ ಸಿಂಗ್ ಕೂಡ ಆಲ್ರೌಂಡರ್ ರವೀಂದ್ರ ಜಡೇಜಾ ಹೆಸರು ಉಲ್ಲೇಖಿಸಿದ್ದು ಜಡೇಜಾ ಉಪನಾಯಕನ ಸ್ಥಾನಕ್ಕೆ ಅತ್ಯಂತ ಸೂಕ್ತ ಆಟಗಾರ ಎಂದು ಹೇಳಿದ್ದಾರೆ.
"ಭಾರತ ತಂಡ ಈಗ ಉಪನಾಯಕನನ್ನು ಹೊಂದಿಲ್ಲ. ಮುಂದಿನ ಉಪನಾಯಕ ಯಾರಾಗಬಹುದು? ನನ್ನ ಪ್ರಕಾರ ಆಡುವ ಬಳಗದಲ್ಲಿ ಆರಂಭದಲ್ಲಿಯೇ ಸ್ಥಾನವನ್ನು ಪಡೆಯುವ ಆಟಗಾರರು ನಾಯಕ ಅಥವಾ ಉಪನಾಯಕನಾಗಬೇಕು. ಅದು ಭಾರತದಲ್ಲಿ ನಡೆಯುವ ಪಂದ್ಯವಾಗಿರಲಿ ಅಥವಾ ವಿದೇಶದಲ್ಲಾಗಿರಲಿ" ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್.
"ನನ್ನ ಪ್ರಕಾರ ರವೀಂದ್ರ ಜಡೇಜಾ ಆ ಮಾದರಿಯ ಆಟಗಾರನಾಗಿದ್ದಾರೆ. ಹಾಗಾಗಿ ರವೀಂದ್ರ ಜಡೇಜಾ ಅವರಿಗೆ ತಂಡದ ಉಪನಾಯಕನ ಜವಾಬ್ಧಾರಿ ನೀಡಬೇಕು. ಯಾಕೆಂದರೆ ಅದು ಅವರಿಗೆ ಮತ್ತಷ್ಟು ಜವಾಬ್ಧಾರಿ ನೀಡುತ್ತದೆ. ಅಲ್ಲದೆ ಆತ ಬಹಳ ಅದ್ಭುತವಾಗಿ ಆಡುತ್ತಿದ್ದಾರೆ. ಅನುಭವಿ ಆಟಗಾರನಾಗಿ ಬಹಳ ಸುದೀರ್ಘ ಕಾಲದಿಂದ ಅವರು ಆಡುತ್ತಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಅವರು ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಜಗತ್ತಿನಲ್ಲಿ ರವೀಂದ್ರ ಜಡೇಜಾ ಅವರಿಗಿಂತ ಉತ್ತಮ ಆಲ್ರೌಂಡರ್ ಇದ್ದಾರೆ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ ಹರ್ಭಜನ್ ಸಿಂಗ್.