ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕರುಣ್ ನಾಯರ್ ಬಾರೀ ಸದ್ದು ಮಾಡುತ್ತಿದ್ದಾರೆ. ದೇಶೀಯ ಏಕದಿನ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಕರುಣ್ ಅವರ ಆಟವನ್ನು ಕಂಡು ಮಾಜಿ ಆಟಗಾರರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಇವರಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ನೀಡುಬೇಕು ಎಂದು ಒತ್ತಾಯ ಹೆಚ್ಚಾಗಿದೆ. ಕರುಣ್ ಅವರ ಮನಮೋಹಕ ಆಟವನ್ನು ಕಂಡು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಸಹ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ವಿದರ್ಭ ಅಮೋಘ ಪ್ರದರ್ಶನ ನೀಡುತ್ತಿದೆ. ಇದರ ಹಿಂದೆ ಕರುಣ್ ನಾಯರ್ ಅವರ ಹೆಸರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇವರು ಈ ಟೂರ್ನಿಯಲ್ಲಿ ಆಡಿದ 7 ಇನಿಂಗ್ಸ್ಗಳಲ್ಲಿ 752 ರನ್ ಸಿಡಿಸಿದ್ದಾರೆ. ಇವರ ರನ್ ದಾಹವನ್ನು ಕಂಡು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬೆನ್ನು ತಟ್ಟಿದ್ದಾರೆ. ಕರುಣ್ ಅವರು ಇದೇ ವೇಗವನ್ನು ಮುಂದುವರಿಸುತ್ತಾರೆ ಎಂದು ಸಚಿನ್ ಆಶಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಕರುಣ್ ನಾಯರ್ ಬಗ್ಗೆ ಟ್ವೀಟರ್ನಲ್ಲಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ನೀವು ನೀಡುತ್ತಿರುವ ಪ್ರದರ್ಶನ ನಿಮ್ಮ ಹಿಂದಿನ ಶ್ರಮ ತೋರಿಸುತ್ತಿದೆ. ಏಕಾಗ್ರತೆ ಕಳೆದುಕೊಳ್ಳಬೇಡಿ. ಸಿಕ್ಕ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಿ ಎಂದು ಸಚಿನ್ ಕರುಣ್ಗೆ ಸಲಹೆ ನೀಡಿದ್ದಾರೆ. ವಿಜಯ್ ಹಜಾರೆಯಲ್ಲಿ ನೀವು ನೀಡುತ್ತಿರುವ ಪ್ರದರ್ಶನ ಅಸಾಧಾರಣಕ್ಕಿಂತ ಕಡಿಮೆ ಏನು ಅಲ್ಲ ಎಂದು ಬರೆದು ಕೊಂಡಿದ್ದಾರೆ.
ಕರುಣ್ ನಾಯರ್ ಈಗಾಗಲೇ ಭಾರತ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ವಿಜಯ ಹಾಜರೆ ಟ್ರೋಫಿಯ ಫೈನಲ್ನಲ್ಲಿ ವಿದರ್ಭ ಕರ್ನಾಟಕ ತಂಡವನ್ನು ಶನಿವಾರ ಎದುರಿಸಲಿದೆ.
ಕರುಣ್ ನಾಯರ್ ಕರ್ನಾಟಕದ ಪರ ಕ್ರಿಕೆಟ್ ಆಡಲು ಅವಕಾಶಗಳು ಸಿಗದೇ ಇದ್ದಗ ಪಕ್ಕದ ವಿದರ್ಭ ತಂಡದತ್ತ ಮುಖ ಮಾಡಿದರು. ಈಗ ಕರುಣ್, ಕರ್ನಾಟಕ ವಿರುದ್ಧದ ಫೈನಲ್ ಪಂದ್ಯದಲ್ಲಿ ತಮ್ಮ ಗೆಳೆಯರ ಸವಾಲು ಸ್ವೀಕರಿಸಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ಇದೇ ಮೊದಲ ಬಾರಿಗೆ ಫೈನಲ್ ತಲುಪಿ ಇತಿಹಾಸ ಬರೆದಿದೆ. ಇನ್ನು ಕರ್ನಾಟಕ ಟೂರ್ನಿಯ ಫೈನಲ್ಗೆ ಐದನೇ ಬಾರಿ ಪ್ರವೇಶ ಪಡೆದಿದೆ. ಈಗಾಗಲೆ ನಾಲ್ಕು ಪ್ರಶಸ್ತಿಯನ್ನು ಗೆದ್ದಿರುವ ಕರ್ನಾಟಕ ಐದನೇ ಪ್ರಶಸ್ತಿಯ ಹುಡುಕಾಟದಲ್ಲಿದೆ.
ಶನಿವಾರ ಬಿಸಿಸಿಐ ಆಯ್ಕೆ ಸಮಿತಿ ಸಭೆ ಮುಂಬೈನಲ್ಲಿ ನಡೆಯಲಿದ್ದು ಈ ವೇಳೆ ಚಾಂಪಿಯನ್ಸ್ ಟ್ರೋಫಿ ಹಾಗೂ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಕರುಣ್ ನಾಯರ್ ಅವರಿಗೆ ಸ್ಥಾನ ನೀಡಬೇಕಾ ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.