
ನವದೆಹಲಿ, ನವೆಂಬರ್ 11: ಭುಜದ ಗಾಯದಿಂದಾಗಿ ವೃದ್ಧಿಮಾನ್ ಸಹಾ ಅವರು ಅನಿವಾರ್ಯವಾಗಿ ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ. ಆದರೆ ಕಳೆದ 5-10 ವರ್ಷಗಲ್ಲಿ ಸಹಾ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದರು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಡಿಸೆಂಬರ್ 2014ರಲ್ಲಿ ಎಂಎಸ್ ಧೋನಿ, ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಗೊಂಡಂದಿನಿಂದಲೂ ವೃದ್ಧಿಮಾನ್ ಅವರು ಭಾರತದ ನಂ. 1 ವಿಕೆಟ್ ಕೀಪರ್ ಎನಿಸಿಕೊಂಡಿದ್ದರು. 34ರ ಹರೆಯದವರಾದ ಸಾಹ ಭುಜದ ಶಸ್ತ್ರ ಚಿಕಿತ್ಸೆಯ ಬಳಿಕ ಈಗ ಚೇತರಿಕೆ ಕಾಣುವುದರಲ್ಲಿದ್ದಾರೆ.
ಸಹಾ ಬಗ್ಗೆ ಮಾತನಾಡುತ್ತ ದಾದಾ, 'ಸುಮಾರು ಒಂದು ವರ್ಷಗಳ ಕಾಲ ಸಾಹ ಭಾರತ ತಂಡದಿಂದ ಹೊರಗಿದ್ದಾರೆ. ಆದರೆ ನನಗನ್ನಿಸಿದಂತೆ ವೃದ್ಧಿಮಾನ್ ಅವರು ಸುಮಾರು 5-10 ವರ್ಷಗಳವರೆಗೂ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿಕೊಂಡಿದ್ದವರು' ಎಂದರು.
ಹಿರಿಯ ಪತ್ರಕರ್ತ ಗೌತಮ್ ಭಟ್ಟಾಚಾರ್ಯ ಬರೆದ ಕ್ರೀಡೆಗೆ ಸಂಬಂಧಿಸಿದ 'ವಿಕಿ' ಕೃತಿಯನ್ನು ಉದ್ಘಾಟಿಸಿ ಮಾತನಾಡಿದ ಗಂಗೂಲಿ, 'ವೃದ್ಧಿಮಾನ್ ಸಹಾ ಆದಷ್ಟು ಶೀಘ್ರ ಚೇತರಿಸಿಕೊಳ್ಳುತ್ತಾರೆ' ಎಂದು ಭಾವಿಸಿದ್ದೇನೆ ಎಂದರು. ಅತ್ತ ಸಹಾ ಕೂಡ ಪ್ರತಿಕ್ರಿಯಿಸಿ, ಡಿಸೆಂಬರ್ ನಲ್ಲಿ ರಣಜಿ ವೇಳೆಗೆ ಕ್ರಿಕೆಟ್ ಮೈದಾನಕ್ಕೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ವರ್ಷಾರಂಭದಲ್ಲಿ ಕೇಪ್ ಟೌನ್ನಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದ ಸಹಾ, 32 ಟೆಸ್ಟ್ ಪಂದ್ಯಗಳಲ್ಲಿ 1164 ರನ್ ಕಲೆ ಹಾಕಿದ್ದರು. ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ರಿಷಬ್ ಪಂತ್ ತಂಡದೊಂದಿಗೆ ಇರಲಿದ್ದಾರೆ. ಮತ್ತೊಬ್ಬ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಕೂಡ ತಂಡದಲ್ಲಿ ಇರಲಿದ್ದಾರೆ.