
ಚೆನ್ನೈ: ಎಂಜಲು ಬಳಸಿ ಚೆಂಡಿನ ಹೊಳಪು ಹೆಚ್ಚಿಸುವುದಕ್ಕೆ ನಿಷೇಧ ಹೇರಿದ ಬಳಿಕ ಚೆಂಡಿನ ನಿರ್ವಹಣೆ ಕಷ್ಟವೆನಿಸಿದೆ. ಬೆವರಿನ ಬಳಕೆ ಎಂಜಲಿನಷ್ಟು ಪರಿಣಾಮಕಾರಿಯಾಗಿಲ್ಲ ಎಂದು ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಹೇಳಿದ್ದಾರೆ. ಕೊರೊನಾವೈರಸ್ ಭೀತಿಯ ಕಾರಣದಿಂದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚೆಂಡಿಗೆ ಎಂಜಲಿನ ಬಳಕೆಯನ್ನು ನಿಷೇಧಿಸಿದೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ರವಾಸಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಶುಕ್ರವಾರ ಮೊದಲನೇ ದಿನದಾಟದ ವೇಳೆ ಭಾರತೀಯ ಬೌಲರ್ಗಳು ವಿಕೆಟ್ ಪಡೆಯಲು ಹೆಣಗಾಡಿದ್ದು ಕಂಡು ಬಂದಿತ್ತು. ಇದರ ಬೆನ್ನಲ್ಲೇ ಜಸ್ಪ್ರೀತ್ ಬೂಮ್ರಾ ಈ ಹೇಳಿಕೆ ನೀಡಿದ್ದಾರೆ.
'ಸ್ವಲ್ಪ ಸಮಯದ ಬಳಿಕ (ಎಸ್ಜಿ) ಚೆಂಡು ಮೃದುವಾಗಲಾರಂಭಿಸುತ್ತದೆ. ಅದು ಬೌನ್ಸ್ ಆಗೋದೂ ಕಡಿಮೆಯಾಗಲಾರಂಭಿಸುತ್ತದೆ. ಚೆಂಡು ಹೊಡೆಯುವಂತೆ ಮಾಡಲು ನಿಮ್ಮಲ್ಲಿ ಹೆಚ್ಚಿನ ಆಯ್ಕೆಯೂ ಇರೋಲ್ಲ. ಇರುವ ಆಯ್ಕೆಗಳಲ್ಲೇ ಕೈಯ ಮೂಲಕ ಏನೆಲ್ಲ ಮಾಡಬಹುದು ಅದನ್ನು ನಾವು ಕಂಡುಕೊಳ್ಳಲು ಯತ್ನಿಸುತ್ತಿದ್ದೇವೆ,' ಎಂದು ಬೂಮ್ರಾ ಹೇಳಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ರೋರಿ ಬರ್ನ್ಸ್ 33, ಡೊಮಿನಿಕ್ ಸಿಬ್ಲಿ 87, ಜೋ ರೂಟ್ 128 ರನ್ನೊಂದಿಗೆ 89.3ನೇ ಓವರ್ಗೆ 3 ವಿಕೆಟ್ ಕಳೆದುಕೊಂಡಿತ್ತು. ಜಸ್ಪ್ರೀತ್ ಬೂಮ್ರಾಗೆ 2, ರವಿಚಂದ್ರನ್ ಅಶ್ವಿನ್ಗೆ 1 ವಿಕೆಟ್ ಲಭಿಸಿತ್ತು.