ಟಿ20 ವಿಶ್ವಕಪ್ನ ಸೂಪರ್ 8 ಹಂತದ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ಈ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಕಾದಾಟ ನಡೆಸಲಿದ್ದು, ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಇವರ ಕೆಚ್ಚೆದೆಯ ಬ್ಯಾಟಿಂಗ್ನಿಂದಾಗಿ ಟೀಮ್ ಇಂಡಿಯಾ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಹಂತದ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ವಿಂಡೀಸ್ 196 ರನ್ಗಳ ಸವಾಲಿನ ಗುರಿಯನ್ನು ಭಾರತಕ್ಕೆ ನೀಡಿತ್ತು. ಆರಂಭದಲ್ಲಿ ಭಾರತ ಪಟಪಟನೇ ವಿಕೆಟ್ ಕಳೆದುಕೊಂಡಿತು. ಆದರೆ ಇನ್ನೊಂದು ತುದಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದ ಸಂಜು ಸ್ಯಾಮ್ಸನ್, ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕ್ಲಾಸಿಕ್ ಇನಿಂಗ್ಸ್ ಆಡಿದರು. ಇವರು 12 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 97 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಟೀಮ್ ಇಂಡಿಯಾ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಸಂಜು ಸ್ಯಾಮ್ಸನ್ ಹೆಲ್ಮೆಟ್ ತೆಗೆದು, ಗಾಳಿಯಲ್ಲಿ ಎಸೆದು ದೇವರಿಗೆ ಧನ್ಯವಾದ ಹೇಳಿದರು.

ಸಂಜು ಸ್ಯಾಮ್ಸನ್ ಇವರ ಈ ಸೆಲೆಬ್ರೆಷನ್ ಈಗ ಸಖತ್ ವೈರಲ್ ಆಗಿದೆ. ಕ್ರಿಕೆಟ್ ನಿಯಮಗಳ ಪ್ರಕಾರ, ಬ್ಯಾಟ್ ಅಥವಾ ಹೆಲ್ಮೆಟ್ ಅನ್ನು ಮೈದಾನಕ್ಕೆ ಎಸೆಯುವುದನ್ನು ಕ್ರೀಡಾ ಮನೋಭಾವಕ್ಕೆ ವಿರುದ್ಧವೆಂದು ಪರಿಗಣಿಸಬಹುದು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಟಗಾರರಿಗೆ ಈ ಬಗ್ಗೆ ಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡುತ್ತದೆ. ಈ ಬಗ್ಗೆ ಐಸಿಸಿ "ಅನುಚಿತ ನಡವಳಿಕೆ" ಅಡಿಯಲ್ಲಿ ಸಂಜು ಅವರಿಗೆ ಪಂದ್ಯ ಶುಲ್ಕ ಅಥವಾ ಡಿಮೆರಿಟ್ ಅಂಕಗಳನ್ನು ನೀಡಬಹುದು.
ಸಂಜು ಸ್ಯಾಮ್ಸನ್ ಅವರ ಈ ರೀತಿ ಸಂಭ್ರಮಾಚರಣೆ ವೈಯಕ್ತಿಕವಾಗಿ ಅವರಿಗೆ ಇದು ಮೊದಲಾಗಿದೆ. ಆದರೆ ಭಾರತೀಯ ಆಟಗಾರನಾಗಿ ಈ ರೀತಿ ಸಂಭ್ರಮಾಚರಣೆ ಮಾಡಿದ್ದು ಇದು ಮೊದಲೇನಲ್ಲ. ಇದಕ್ಕೂ ಮೊದಲು ಐಪಿಎಲ್ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಬ್ಯಾಟ್ ಮಾಡಿದ ಆವೇಶ್ ಖಾನ್, ಆರ್ಸಿಬಿ ವಿರುದ್ಧ ಅಬ್ಬರಿಸಿದ್ದರು. ಪಂದ್ಯ ಬಳಿಕ ಅವರು ಹೆಲ್ಮೆಟ್ ನೆಲಕ್ಕೆ ಎಸೆದಿದ್ದರು. ಈ ನಡುವಳಿಕೆಗೆ ಅವರಿಗೆ ಅಧಿಕೃತ ಎಚ್ಚರಿಕೆಯನ್ನು ನೀಡಲಾಗಿತ್ತು.
ಸಂಜು ಸ್ಯಾಮ್ಸನ್ ಅವರ ಸೆಲೆಬ್ರೇಷನ್ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಆದರೆ ಟೀಮ್ ಇಂಡಿಯಾ ಸಂಜು ಸ್ಯಾಮ್ಸನ್ ಆಟದ ಬಲದಿಂದ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ ಸಮಾಧಾನ ತಂಡಕ್ಕಿದೆ. ಭಾರತ ಈಗ ಸೆಮಿಫೈನಲ್ ಪಂದ್ಯವನ್ನು ಮಾರ್ಚ್ 5 ರಂದು ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ಆಡಲಿದೆ.