
ಕೊಲಂಬೊ, ಫೆಬ್ರವರಿ 26: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯ ಸೂರ್ಯ ಅವರನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎರಡು ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧಿಸಿದೆ. ಭ್ರಷ್ಟಾಚಾರ ನಿಗ್ರಹ ದಳದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಜಯಸೂರ್ಯ ಅವರನ್ನು ನಿಷೇಧಿಸಿರುವುದಾಗಿ ಐಸಿಸಿ ತಿಳಿಸಿದೆ.
49ರ ಹರೆಯದ ಜಯಸೂರ್ಯ ಅವರು ಭ್ರಷ್ಟಾಚಾರ ತನಿಖೆಗೆ ಸಹಕರಿಸಿಲ್ಲ ಎಂದು ಐಸಿಸಿ ಆರೋಪಿಸಲಾಗಿತ್ತು. ಇದನ್ನು ಸನತ್ ನಿರಾಕರಿಸಿದ್ದರು. ಆದರೆ ಮತ್ತೆ ವಿಚಾರಣೆ ನಡೆಸಿರುವ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ, ಜಯಸೂರ್ಯ ಅವರನ್ನು ತಪ್ಪಿತಸ್ಥನನ್ನಾಗಿ ಘೋಷಿಸಿದೆ.
2012ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸನತ್ ನಿವೃತ್ತಿ ಘೋಷಿಸಿದ್ದರು. ಅನಂತರ ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷ ಜವಾಬ್ದಾರಿ ಕೂಡ ನಿರ್ವಹಿಸಿದ್ದರು. ಈ ವೇಳೆ ಜಯಸೂರ್ಯ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿ ಐಸಿಸಿ ಜೊತೆ ಸರಿಯಾದ ಸಹಕಾರ ನೀಡಿಲ್ಲ ಎಂದು ಐಸಿಸಿ ಭ್ರಷ್ಟಾಚಾರ ನಿಗ್ರಹದಳ ಆರೋಪಿಸಿತ್ತು.
'ಮ್ಯಾಚ್ ಫಿಕ್ಸಿಂಗ್, ಪಿಚ್ ಫಿಕ್ಸಿಂಗ್ಸ್ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ನನ್ನ ಮೇಲೆ ಆರೋಪಗಳಿಲ್ಲ. ಹಾಗಿದ್ದೂ ನನ್ನ ಮೇಲೆ ಭ್ರಷ್ಟಾಚಾರ ನಿಗ್ರಹ ನೀತಿ ಉಲ್ಲಂಘಿಸಿದ ಆರೋಪ ಮಾಡಲಾಗಿದೆ' ಎಂದು ಸನತ್ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಅಂತಿಮವಾಗಿ ಜಯಸೂರ್ಯ ಅವರನ್ನು ಐಸಿಸಿ ತಪ್ಪಿತಸ್ಥನನ್ನಾಗಿಸಿದೆ.