
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ರೋಹಿತ್ ಶರ್ಮಾಗೆ ಸಾಥ್ ನೀಡಿದ್ದರು. ಈ ಜೋಡಿ ಅದ್ಭುತ ಆಟವನ್ನು ಪ್ರದರ್ಶಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಇದು ತಂಡದ ಗೆಲುವಿನ ಜೊತೆಗೆ ಸರಣಿ ಗೆಲುವಿಗೂ ಕಾರಣವಾಯಿತು. ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಕೊಹ್ಲಿ ಆರಂಭಿಕನಾಗಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದರು. ಇದಕ್ಕೆ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಹಾಗೂ ಸಂಜಯ್ ಬಂಗಾರ್ ಪ್ರತಿಕ್ರಿಯಿಸಿದ್ದಾರೆ.
ತಂಡದ ಅತ್ಯುತ್ತಮ ಆಟಗಾರರು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಓವರ್ ಬ್ಯಾಟಿಂಗ್ ಮಾಡಬೇಕು. ಹಾಗಾಗಿ ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಬಹುಶಃ ಕೆಎಲ್ ರಾಹುಲ್ ಫಾರ್ಮ್ ಕಳೆದುಕೊಂಡಿರಿಂದಾಗಿ ನಾವು ನೋಡಲು ಬಯಸುತ್ತಿದ್ದ ಆರಂಭಿಕ ಜೋಡಿ ನಮಗೆ ದೊರೆತಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
"ಸಚಿನ್ ತೆಂಡೂಲ್ಕರ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ನಂತರ ಅವರನ್ನು ಆರಂಭಿಕನನ್ನಾಗಿ ಕಳುಹಿಸಲಾಯಿತು. ಇದರಿಂದಾಗಿ ಅವರ ಬ್ಯಾಟಿಂಗ್ ಮಾತ್ರವಲ್ಲದೆ ಅದು ಇಡೀ ತಂಡದ ಮೇಲೆಯೇ ಪರಿಣಾಮ ಬೀರಿತು. ಹೀಗಾಗಿ ನಿಮ್ಮ ಅತ್ಯುತ್ತಮ ಬ್ಯಾಟ್ಸ್ಮನ್ ಎಷ್ಟು ಸಾಧ್ಯವೋ ಅಷ್ಟು ಓವರ್ಗಳ ಬ್ಯಾಟಿಂಗ್ ನಡೆಸಬೇಕು" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಿದ ನಿರ್ಧಾರದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಈ ನಿರ್ಧಾರವನ್ನು ಅವರೇ ಕೈಗೊಂಡರೋ ಅಥವಾ ಮ್ಯಾನೇಜ್ಮೆಂಟ್ ಕೈಗೊಂಡಿತೋ, ಆದರೆ ಇದರಿಂದಾಗಿ ತಂಡದ ಇಬ್ಬರು ಅತ್ಯುತ್ತಮ ಆಟಗಾರರು ಅತಿ ಹೆಚ್ಚಿನ ಎಸೆತಗಳನ್ನು ಎದುರಿಸುವ ಅವಕಾಶ ದೊರೆಯುತ್ತದೆ" ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿಯಂತಾ ಯಾವುದೇ ಆಟಗಾರನಿಗೆ ಇದು ಬಹಳಷ್ಟು ಸೂಕ್ತವಾಗಿದೆ ಯಾಕೆಂದರೆ ಆತ 30 ಎಸೆತಗಳ ನಂತರ ಅಕ್ಷರಶಃ ಟೇಕ್ಆಫ್ ಆಗುತ್ತಾರೆ. ಎಂದು ಸಂಜಯ್ ಬಂಗಾರ್ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.