
ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಟೀಮ್ ಇಂಡಿಯಾದ ಆಟಗಾರ ರಾಹುಲ್ ತ್ರಿಪಾಠಿ ಮೂರನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. 22 ಎಸೆತಗಳನ್ನು ಎದುರಿಸಿದ ರಾಹುಲ್ ತ್ರಿಪಾಠಿ 44 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ಆರಂಭಿಕ ಆಟಗಾರ ಇಶಾನ್ ಕಿಶನ್ ವಿಕೆಟನ್ನು ಶೀಘ್ರದಲ್ಲಿಯೇ ಕಳೆದುಕೊಂಡರೂ ಯಾವುದೇ ಅಂಜಿಕೆಯಿಲ್ಲದೆ ಬ್ಯಾಟ್ ಬೀಸಲು ಆರಂಭಿಸಿದ ರಾಹುಲ್ ತ್ರಿಪಾಠಿ ಈ ಪಂದ್ಯದಲ್ಲಿ ಯಶಸ್ಸು ಸಾಧಿಸಿದರು.
ರಾಹುಲ್ ತ್ರಿಪಾಠಿ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಅಭಿಮಾನಿಗಳನ್ನು ಮಾತ್ರವೇ ರಂಜಿಸಿಲ್ಲ. ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ತ್ರಿಪಾಠಿ ಬ್ಯಾಟಿಂಗ್ ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಆತನಿಗೆ ನೀಡಿರುವ ಜವಾಬ್ಧಾರಿಗೆ ತಕ್ಕನಾಗಿ ನ್ಯಾಯ ಒದಗಿಸಿದ್ದಾರೆ ಎಂದು ಸಂಜಯ್ ಬಂಗಾರ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
"ಆತ ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡರು. ತಾನು ಅದ್ಭುತವಾದ ಲಯದಲ್ಲಿದ್ದು ಉತ್ತಮವಾಗಿ ಆಡುತ್ತಿರುವುದು ತಿಳಿದಿದ್ದರು ಅವರು ದುರದೃಷ್ಟಕರರೀತಿಯಲ್ಲಿ ವಿಕೆಟ್ ಕಳೆದುಕೊಂಡರು. ನೀವು ಆತನನ್ನು ಎಷ್ಟು ಹೊಗಳಿದರೂ ಅದು ಕಡಿಮೆ. ಭಾರತ ತಂಡವು ಆತನಿಗೆ ನೀಡಿದ ಪಾತ್ರವನ್ನು ಅವರು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ" ಎಂದು ಬಂಗಾರ್ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
"ಅವರು ಎಲ್ಲಿ ರನ್ ಗಳಿಸಿದರು ಎಂದು ನೋಡಿದರೆ, ಫೈನ್ ಲೆಗ್ ಫೀಲ್ಡರ್ ಮೇಲೆ ಸಿಕ್ಸರ್ ಹೊಡೆದರು ಮತ್ತು ಶಾರ್ಟ್ ಫೈನ್ ಲೆಗ್ನಲ್ಲಿ ಫೀಲ್ಡರ್ ಇದ್ದರೂ ಅಲ್ಲಿ ಮೂರು ಬೌಂಡರಿಗಳನ್ನು ಬಾರಿಸಿದರು. ಅವರು ಬಹುಶಃ ಭಾಗದಲ್ಲಿ ರನ್ಗಳಿಸುವ ಕಲೆಯನ್ನು ಮೊದಲೇ ಅರಿತುಕೊಂಡಿದ್ದರು ಅನಿಸುತ್ತದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಸಂಜಯ್ ಬಂಗಾರ್.
ರಾಹುಲ್ ತ್ರಿಪಾಠಿ ಮಾತ್ರವಲ್ಲದೆ ಭಾರತದ ಇತರ ಬ್ಯಾಟರ್ಗಳು ಕೂಡ ಆಕ್ರಮಣಕಾರಿ ಪ್ರದರ್ಶನ ನೀಡಿದ್ದಾರೆ. ಇದರ ಪರಿಣಾಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳ ಅಂತ್ಯದಲ್ಲಿ ಭರ್ಜರಿ 234 ರನ್ಗಳನ್ನು ಗಳಿಸಿತು. ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಚೊಚ್ಚಲ ಟಿ20 ಶತಕ ಸಿಡಿಸಿ ಮಿಂಚಿದ್ದಾರೆ.