
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಈಗಾಗಲೇ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಜೂನ್ ಮೊದಲನೇ ವಾರ ಈ ತಂಡ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದ್ದು ಜುಲೈ ತಿಂಗಳಿನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಶ್ರೀಲಂಕಾದಲ್ಲಿ ಸೀಮಿತ ಓವರ್ಗಳ ಸರಣಿಗಳನ್ನು ಆಯೋಜಿಸಲಾಗಿದೆ.
ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಆಟಗಾರರು ಲಂಕಾ ವಿರುದ್ಧದ ಸರಣಿಗೆ ಅಲಭ್ಯರಾಗುವ ಕಾರಣ ಬಿಸಿಸಿಐ ಆ ಆಟಗಾರರನ್ನು ಹೊರತುಪಡಿಸಿದಂತೆ ಮತ್ತೊಂದು ಟೀಮ್ ಇಂಡಿಯಾ ತಂಡವನ್ನು ರಚಿಸಲಿದೆ. ಇದೀಗ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾದ ಸಂಭಾವ್ಯ ತಂಡವನ್ನು ರಚಿಸಿದ್ದು ಕನ್ನಡಿಗ ಮನೀಷ್ ಪಾಂಡೆ ಅವರನ್ನು ತಂಡದಲ್ಲಿ ಪರಿಗಣಿಸಿದ್ದಾರೆ.
ಸಂಜಯ್ ಮಂಜ್ರೇಕರ್ ರಚಿಸಿರುವ ಈ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಬದಲು ಇಶಾನ್ ಕಿಶನ್ ಅವರನ್ನು ಆರಿಸಿರುವುದು ಸದ್ಯ ಚರ್ಚಾಸ್ಪದ ವಿಷಯವಾಗಿದೆ. ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಸಂಜಯ್ ಮಂಜ್ರೇಕರ್ ರಚಿಸಿರುವ ಟೀಮ್ ಇಂಡಿಯಾ ಸಂಭಾವ್ಯ ತಂಡ ಹೀಗಿದೆ : ಶಿಖರ್ ಧವನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯ, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್ ಹಾಗೂ ಚೇತನ್ ಸಕಾರಿಯಾ.