
ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ಆಲ್ ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರು. ಇಬ್ಬರೂ ಅಜೇಯ ಆಟ ಆಡಿದ್ದಲ್ಲದೆ ತಂಡಕ್ಕೆ ಅರ್ಧ ಶತಕಗಳ ಕೊಡುಗೆಯಿತ್ತು ತಂಡದ ಗೆಲುವಿಗೆ ಕಾರಣರಾಗಿದ್ದರು.
6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಹಾರ್ದಿಕ್ ಪಾಂಡ್ಯ 76 ಎಸೆತಗಳಿಗೆ 92 ರನ್ ಬಾರಿಸಿದ್ದರೆ, 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ರವೀಂದ್ರ ಜಡೇಜಾ 50 ಎಸೆತಗಳಿಗೆ 66 ರನ್ ಬಾರಿಸಿದ್ದರು. ಹೀಗಾಗಿಯೇ ಭಾರತ ತಂಡ 302 ರನ್ ಗಳಿಸಿತ್ತು. ಆದರೆ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 289 ರನ್ ಬಾರಿಸಿ ಶರಣಾಯ್ತು.
ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಬ್ಯಾಟಿಂಗ್ ನೋಡುತ್ತಲೇ ನೆಟ್ಟಿಗರು ಭಾರತದ ಮಾಜಿ ಬ್ಯಾಟ್ಸ್ಮನ್, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅವರ ಕಾಲೆಳೆಯತೊಡಗಿದ್ದಾರೆ. ಜಡೇಜಾ ಅರ್ಧ ಶತಕ ಪೂರೈಸುವಾಗ ಮಂಜ್ರೇಕರ್ ಕಾಮೆಂಟರಿ ಮಾಡುತ್ತಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಂಜ್ರೇಕರ್ ಹೆಚ್ಚು ತಮಾಷೆಗೀಡಾಗಿದ್ದಾರೆ.
ಅಂದ್ಹಾಗೆ, ಜಡೇಜಾ ಅರ್ಧ ಶತಕ ಬಾರಿಸುತ್ತಲೇ ಮಂಜ್ರೇಕರ್ ಟ್ರೋಲ್ ಆಗಿದ್ದಕ್ಕೆ ಒಂದು ಹಿನ್ನಲೆಯಿದೆ. 2019ರ ವಿಶ್ವಕಪ್ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಜಡೇಜಾ ವಿರುದ್ಧ ಮಂಜ್ರೇಕರ್ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿದ್ದರು. ಬಿಸಿಸಿಐ ಕಾಮೆಂಟರಿ ಪ್ಯಾನೆಲ್ನಿಂದ ಕಿತ್ತೊಗೆಯಲ್ಪಟ್ಟಿದ್ದರು ಕೂಡ. ಈಗ ಮಂಜ್ರೇಕರ್ ಮತ್ತೆ ಸುದೀರ್ಘ ಸಮಯದ ಬಳಿಕ ಕಾಮೆಂಟರಿಗೆ ಬಂದಿದ್ದಾರೆ.